ಬಂಟ್ವಾಳ: ಗೋವಿನ ಆರಾಧನೆಯ ಹಿಂದೆ ವಿಶೇಷ ಪುಣ್ಯವಿದ್ದು, ಜಾಗೃತ ಸಮಾಜ ಗೋವಿನ ಕುರಿತು ಎಚ್ಚೆತ್ತುಕೊಳ್ಳುವುದು ಅತಿ ಅಗತ್ಯವಾಗಿದೆ. ನಾವು ಹೆತ್ತವರಿಗೆ ನೋವು ಕೊಡದೇ ಇರುವುದು ನಿಜವಾದ ಜೀವನವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಠ್ಯಬ್ದ ಮಹೋತ್ಸವ ಸಮಿತಿ ಬಂಟ್ವಾಳದ ಆಶ್ರಯದಲ್ಲಿ ನಡೆದ ಗೋ ಆರಾಧನೆ ಮತ್ತು ಗುರುವಂದನೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯೀ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಗೋವನ್ನು ಸಾಕುವವರು ಕೇವಲ ಹಾಲಿನ ಲೆಕ್ಕಾಚಾರ ಹಾಕದೆ ಅದರ ಗೊಬ್ಬರವೂ ಲಾಭದ ಭಾಗವಾಗಿದೆ ಎಂದು ಲೆಕ್ಕಾಚಾರ ಹಾಕಬೇಕಿದೆ. ಸ್ವಾಮೀಜಿಯವರು ನಾಡಿಗೆ ವಿಶೇಷ ಕೊಡುಗೆಯನ್ನು ನೀಡಿದ್ದು, ಅವರ ೧೦೦ನೇ ಹುಟ್ಟು ಹಬ್ಬದ ಸಂಭ್ರಮವನ್ನೂ ಬಂಟ್ವಾಳದ ಜನತೆ ಆಚರಿಸುವಂತಾಗಲಿ ಎಂದರು.
ನಿವೃತ್ತ ಪ್ರಾಧ್ಯಾಪಕ ಸೋಂದೆ ಡಾ.ಭಾಸ್ಕರ ಭಟ್ ಕಟೀಲು ಅವರು ಮಾತನಾಡಿ, ಇಡೀ ಜಗತ್ತಿನಲ್ಲೇ ಗೋವು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ನಾವು ಗೋವನ್ನು ಆರಾಧಿಸಿದರೆ ಎಲ್ಲಾ ದೇವರನ್ನೂ ಆರಾಧಿಸುವುದಕ್ಕೆ ಸಮನಾಗುತ್ತದೆ ಎಂದರು. ಬಂಟ್ವಾಳ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ತುಕರಾಮ್ ಪೂಜಾರಿ ಅವರು ಪ್ರಸ್ತಾವನೆಗೈದರು. ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಸಮಿತಿಯ ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ವೇದಿಕೆಯಲ್ಲಿದ್ದರು.ಷಷ್ಠ್ಯಬ್ದ ಮಹೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ರಕ್ತೇಶ್ವರೀ ಸನ್ನಿಧಿಯಿಂದ ಮೆರವಣಿಗೆ ನಡೆಯಿತು.