ಮಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಗಳನ್ನು ತಿಳಿಯದೇ, ಹೊರಗಿನಿಂದ ನೋಡಿ ಸಂಘವನ್ನು ಟೀಕೆ ಮಾಡುತ್ತಿದ್ದಾರೆ. ಸಂಘ ವ್ಯಕ್ತಿತ್ವ ನಿರ್ಮಾಣದ ಕೆಲಸ ಮಾಡುತ್ತಿದೆಯೇ ಹೊರತು ಬೇರೆನಲ್ಲ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಆರನೇ ತರಗತಿಯಿಂದ ಸಂಘದ ಶಾಖೆಗೆ ತೆರಳಿದ್ದೇನೆ. ಸಂಘ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿಕೊಡುತ್ತದೆ. ವ್ಯಕ್ತಿತ್ವ ನಿರ್ಮಾಣವನ್ನು ಹೇಗೆ ಮಾಡುತ್ತದೆ ಎಂಬುದಕ್ಕೆ ಸಚಿವ ಸ್ಥಾನದವರೆಗೆ ಬೆಳೆದ ನಾನೇ ಉದಾಹರಣೆ ಎಂದರು.
ಟೀಕೆಯಿಂದ ಸಂಘಕ್ಕೆ ಏನೂ ಆಗುವುದಿಲ್ಲ. ಟೀಕೆಗಳಿಗೆ ಆರ್ ಎಸ್ ಎಸ್ ತಲೆಕೆಡಿಸಿಕೊಂಡಿಲ್ಲ. ಸಂಘ ಪ್ರತಿನಿತ್ಯ ಬೆಳೆಯುತ್ತಿದೆ. ಟೀಕೆ ಮಾಡಿದವರ ಪರಿಸ್ಥಿತಿ ಮಾತ್ರ ಕೆಳಮಟ್ಟಕ್ಕೆ ಹೋಗುತ್ತಿದೆ ಎಂದು ಅಂಗಾರ ಹೇಳಿದರು.