ಮಂಗಳೂರು: ಕೆಲದಿನಗಳ ಹಿಂದೆ ಬೆಳ್ತಂಗಡಿಯಲ್ಲಿ ಕೊಲೆಯಾದ ಹಿಂದೂ ಹುಡುಗನ ಪರವಾಗಿ ಇಲ್ಲಿನ ಹಾಲಿ ಶಾಸಕರು ಒಂದೇ ಒಂದು ಮಾತನಾಡಿಲ್ಲ. ಕೊಲೆಯಾದ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತ ಕೃಷ್ಣ ಅಲಿಯಾಸ್ ಕಿಟ್ಟನಿಂದ ಕೊಲೆಯಾದ ದಿನೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಆರೋಪಿಯ ಸಹೋದರರು ಹೊಯ್ಗೆ, ಮರದ, ಗೋಮಾಂಸ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಸಾವಿನಲ್ಲಿ ಬಿಜೆಪಿಗರು ರಾಜಕೀಯ ಮಾಡಿದರು. ಆದರೆ ನಾವು ಹೆಣ ರಾಜಕೀಯ ಮಾಡಿಲ್ಲ. ಕೊಲೆಯಾದ ದಿನೇಶ್ ಅವರಿಗೆ ಪತ್ನಿ, 3 ಮಕ್ಕಳು ಹಾಗೂ ವೃದ್ದೆ ತಾಯಿ ಇದ್ದಾರೆ. ಕೊಲೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಡಿಕೆಶಿ ಹಾಗೂ ಮಂಗಳೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರಿಗೂ ಮನವಿ ಪತ್ರ ನೀಡಲಿದ್ದೇವೆ. ಮೃತ ದಿನೇಶ್ ಅವರಿಗೆ ನಿಧಿ ಸಂಗ್ರಹದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಪೊಲೀಸ್ ಠಾಣೆಗೂ ಬಂದು ಧಮ್ಕಿ ಹಾಕಿದ್ದ ಆರೋಪಿ
ಮೃತ ದಿನೇಶನ ತಾಯಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುತ್ತಿದ್ದಾಗ ಅಲ್ಲಿಗೆ ಬಂದ ಭಾಸ್ಕರ ಕೇಸು ದಾಖಲಿಸದಂತೆ ಧಮ್ಕಿ ಸಹ ಹಾಕಿದ್ದ, ಪೊಲೀಸರಿಗೂ ಟ್ರಾನ್ಸ್ಫರ್ ಮಾಡುವ ಬೆದರಿಕೆಯನ್ನೊಡ್ಡಿದ್ದ ಎಂದು ಹೇಳಿದರು. ಆದರೂ ಪೊಲೀಸರು ಕೇಸು ದಾಖಲಿಸಿ ಯಾವುದೇ ಬೆದರಿಕೆ ಬಗ್ಗದೇ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಹೇಳಿದರು.
‘ಅವರು ರಕ್ತ ಕುಡಿಯುವವರು’
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮೃತ ದಿನೇಶ್ ತಾಯಿ ಮಾತನಾಡಿ, ನನ್ನ ಮಗ ಸಾಧು ಸ್ವಭಾದವ. ಯಾರೊಂದಿಗೂ ಜಗಳ ಮಾಡುತ್ತಿರಲಿಲ್ಲ. ಕೊಲೆಗೈದ ಕೃಷ್ಣ ಅಲಿಯಾಸ್ ಕಿಟ್ಟ ಹಾಗೂ ದಿನೇಶ್ ಮಧ್ಯೆ ಪೂರ್ವ ದ್ವೇಷ ಇರಲಿಲ್ಲ. ‘ನಿನಗೆ ಆಸ್ತಿಯ ದಾಖಲೆ ಪತ್ರವನ್ನು ನಾನು ಕಾಂಗ್ರೆಸ್ ಶಾಸಕ ವಸಂತ ಬಂಗೇರ ಅವರ ಮಾಡಿಸಿದ್ದೇ ನಾನು ಎಂದಾಗ ಆರೋಪಿ ಕಾಂಗ್ರೆಸ್ನವರ ಸುದ್ದಿ ನನ್ನ ಹತ್ತಿರ ಮಾತನಾಡಬೇಡ ಎಂದು ದೊಣ್ಣೆಯಿಂದ ಹೊಡೆದು ಗಂಭೀರ ಗಾಯಗೊಳಿಸಿ ಸಾಯಿಸಿದ್ದಾನೆ ಎಂದು ಆರೋಪಿ ತಾಯಿ ಪದ್ಮಾವತಿ ಆರೋಪಿಸಿದ್ದಾರೆ.