ಉಜಿರೆ: ಕನ್ನಿಕಾ ವ್ಯಕ್ತಿತ್ವ ವಿಕಸನ ಶಿಬಿರ ಬೆಳ್ತಂಗಡಿ: ಮಕ್ಕಳಿಗೆ ತಾಯಿಯೇ ಮೊದಲ ಗುರು. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ತಾಯಿಯೇ ಜವಾಬ್ದಾರಿ ವಹಿಸಿ ಹಂತ ಹಂತವಾಗಿ ಅವರಿಗೆ ಬಾಲ್ಯ ಸಂಸ್ಕಾರದ ಶಿಕ್ಷಣವನ್ನು ನೀಡಲು ಹೆಚ್ಚು ಗಮನ ಹರಿಸಬೇಕು. ಕೂಡು ಕುಟುಂಬದ ಮಕ್ಕಳು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ಅರಿತುಕೊಳ್ಳುತ್ತಾರೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ಹೆಣ್ಣು ಮಕ್ಕಳು ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವುದರೊಂದಿಗೆ ಮನೆಕೆಲಸದಲ್ಲೂ ಶಿಸ್ತು,ಅಚ್ಚುಕಟ್ಟುತನ ಕಲಿತು ಆದರ್ಶ ಗ್ರಹಿಣಿಯಾಗಿ ಬಾಳಿ ಎರಡೂ ಮನೆ ಬೆಳಗುವ ಆದರ್ಶ ಮಗಳಾಗಿ ರೂಪುಗೊಳ್ಳಲು ಉತ್ತಮ ಶಿಕ್ಷಣದ ಭದ್ರ ತಳಹದಿ ಗೆ ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಶಿಕ್ಷಕಿ ಶ್ರೀಮತಿ ಸುವರ್ಣಲತಾ ಅಶೋಕ್ ಭಾಂಗಿಣ್ಣಾಯ ನುಡಿದರು.
ಅವರು ಎ 30 ರಂದು ಉಜಿರೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ) ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಒಂದು ದಿನದ “ಕನ್ನಿಕಾ ವ್ಯಕ್ತಿತ್ವ ವಿಕಸನ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ , ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ,ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು ,ತಾಲೂಕು ಶಿವಳ್ಳಿ ಸಭಾ ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ ಉಪಸ್ಥಿತರಿದ್ದರು. ಮಹಿಳಾ ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಸ್ವಾಗತಿಸಿ,ಗಾಯತ್ರಿ ಶ್ರೀಧರ್ ನಿರೂಪಿಸಿ,ಮಹಿಳಾ ಘಟಕ ಉಜಿರೆ ವಲಯದ ಕಾರ್ಯದರ್ಶಿ ವಾಣಿ ಸಂಪಿಗೆತ್ತಾಯ ವಂದಿಸಿದರು. . ತಾಲೂಕು ಘಟಕ ಕಾರ್ಯದರ್ಶಿ ಸರೋಜಾ ಕೆದಿಲಾಯ ಸಹಕರಿಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ “ವ್ಯಕ್ತಿತ್ವ ವಿಕಸನ” ಕುರಿತಾಗಿ ಎಸ್ .ಜಿ.ಭಟ್ ಅವರು, ಸಂಸ್ಕೃತಿ,ಆಚಾರ-ವಿಚಾರ ಕುರಿತು ಶ್ರೀ ಧ .ಮಂ ಪ. ಪೂ . ಕಾಲೇಜು ಸಂಸ್ಕೃತ ಉಪನ್ಯಾಸಕ ಡಾ ! ಪ್ರಸನ್ನಕುಮಾರ್ ಐತಾಳ್ ಹಾಗು ಕರಕುಶಲ ಚಟುವಟಿಕೆ ಕುರಿತು ಶ್ರೀಮತಿ ಶಿಲ್ಪ ಕಾರ್ತಿಕ್ ಬೈಪಾಡಿತ್ತಾಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು . ಮದ್ಯಾಹ್ನ ಶಿಬಿರಾರ್ಥಿಗಳು ಉಜಿರೆಯ ಜೆ.ಪಿ.ಫಾರ್ಮ್ಸ್ ನ ಜಗದೀಶ್ ಪ್ರಸಾದ್ ಅವರ ಕೃಷಿ ಹಾಗು ಹೈನುಗಾರಿಕೆ ಪ್ರದೇಶ ವೀಕ್ಷಣೆ ನಡೆಸಿ ಸ್ವಾನುಭವ ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರದಲ್ಲಿ ತಾಲೂಕಿನ ಸುಮಾರು 35 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಗು ಹೆತ್ತವರು ಭಾಗವಹಿಸಿದ್ದರು .