ಬೆಳ್ತಂಗಡಿ: ತಾಲೂಕಿನ ನಡ ಗ್ರಾಮಪಂಚಾಯತಿ ವ್ಯಾಪ್ತಿಯ ಕನ್ಯಾಡಿ-1ಗ್ರಾಮದ ಗುರಿಪಳ್ಳ ಸಮೀಪದ ಅಂಬಡಬೆಟ್ಟು ಎಂಬಲ್ಲಿ ಸುಮಾರು 5 ಎಕರೆಗಿಂತ ಅಧಿಕ ಜಾಗಕ್ಕೆ ಬೆಂಕಿ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.
ಇಲ್ಲಿನ ಸೀತಾ ಹೆಬ್ಬಾರ್ ಎಂಬವರ ಜಾಗದ ಪಕ್ಕದಲ್ಲಿ ಎಚ್.ಟಿ. ವಿದ್ಯುತ್ ಲೈನ್ ಹಾಗೂ ವಿದ್ಯುತ್ ಪರಿವರ್ತಕ ವಿದ್ದು, ಇದರಿಂದ ಹಾರಿದ ಕಿಡಿಗಳಿಂದ ಹುಲ್ಲು ಬೆಳೆದಿದ್ದ ಜಾಗದಲ್ಲಿ ಬೆಂಕಿ ಆವರಿಸಿತ್ತು.
ಬೆಂಕಿಯು ಕ್ಷಣಾರ್ಧದಲ್ಲಿ ಪರಿಸರವನ್ನು ವ್ಯಾಪಿಸಿ ಭಯದ ವಾತಾವರಣವನ್ನು ಸೃಷ್ಟಿಸಿತು.ಅಗ್ನಿಶಾಮಕ ದಳದ ಎರಡು ವಾಹನಗಳು ಆಗಮಿಸಿ, ಸುಮಾರು ಎರಡು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸ್ಥಳೀಯರು ಹೆಚ್ಚಿನ ಸಹಕಾರ ನೀಡಿದರು