ಬೆಳ್ತಂಗಡಿ : ‘ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ವಿಜಯ ರಾಘವ ಪಡ್ವೆಟ್ನಾಯರ ಶುಭಾಶೀರ್ವಾದಗಳೊಂದಿಗೆ ಮಂದಾರ ಕಲಾವಿದರು ಉಜಿರೆ ಇವರ ನೇತತ್ವದಲ್ಲಿ ಜಿಲ್ಲಾ ಮಟ್ಟದ ತುಳು ನಾಟಕೋತ್ಸವ ಮಂದಾರ ಪ್ರಶಸ್ತಿ -2022 ಕಾರ್ಯಕ್ರಮ ಉಜಿರೆ ಶಾರದಾ ಮಂಟಪದಲ್ಲಿ ಏ.18 ರಿಂದ 23 ರವರೆಗೆ ನಡೆಯಲಿದೆ’ ಎಂದು ಮಂದಾರ ಕಲಾ ತಂಡದ ಗೌರವಾಧ್ಯಕ್ಷ ಸುಂದರ ರೈ ಮಂದಾರ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ.18 ರಂದು ಸಂಜೆ 6.30 ಕ್ಕೆ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ರಂಗವೇದಿಕೆ ಉದ್ಘಾಟಿಸಲಿದ್ದಾರೆ. ಮುಂಡಾಜೆ ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ್ ರಾವ್, ಹಾಸ್ಯ ಕಲಾವಿದ ನವೀನ್ ಡಿ ಪಡೀಲ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ರಂಗ ಕಲಾವಿದ ಸುಂದರ ರೈ ಮಂದಾರ, ವಕೀಲ ಧನಂಜಯ್ ರಾವ್ ಹಾಗೂ ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಎನ್.ಕುಲಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 8 ರಿಂದ ಮಾನಸ ಕಲಾವಿದರು ಪುತ್ತೂರು ಇವರ ಅಭಿನಯದ ಬಂಗಾರ್ ಬಾಬು ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು.
ಪ್ರತಿದಿನ ಕಲಾ ಕ್ಷೇತ್ರದ ಅನರ್ಘ್ಯ ರತ್ನಗಳ ಸಂಗಮ ಕಾರ್ಯಕ್ರಮದೊಂದಿಗೆ ಏ.19 ರಂದು ರಾತ್ರಿ 8 ಗಂಟೆಗೆ ಕಲಾ ಶ್ರೀ ಕಲಾವಿದರು ಕುಡ್ಲ ಇವರಿಂದ ನಾಲಾಯಿ ಮಗುರುಜಿ, 20 ರಂದು ಪಲ್ಗುಣಿ ಕಲಾವಿದರು ವೇಣೂರು ಅಭಿನಯದ ವಸಂತಿಯಕ್ಕ ಓಲ್ಲೇರ್ ಗೆ , 21 ರಂದು ಪಿಂಗಾರ ಕಲಾವಿದರು ಬೆದ್ರ ಇವರ ಅಭಿನಯದ ನಂಬುಂಡ ನಂಬುಲೆ, 22 ರಂದು ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಇವರ ಅಭಿನಯದ ಅರ್ಗಂಟ್ ತುಳು ಹಾಸ್ಯಮಯ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.
ಏ.23 ರಂದು ರಾತ್ರಿ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಪ್ರಮುಖರಾದ ಶರತ್ ಕೃಷ್ಣ ಪಡ್ವೆಟ್ನಾಯ, ಸತೀಶ್ಚಂದ್ರ ಸುರ್ಯಗುತ್ತು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಕಲಾವಿದರಾದ ರಮಾ ಬಿ.ಸಿ. ರೋಡ್ ಹಾಗೂ ಕಿರಣ್ ಸುರ್ಯ ಇವರಿಗೆ ‘ಮಂದಾರ ಬಿರುದು’ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಮಂದಾರ ಕಲಾವಿದರು ಅಭಿನಯಿಸುವ ‘ನಮ ನಮ್ಮಾತೆಗೆ’ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಪ್ರಥಮ ಬಹುಮಾನ ಪಡೆಯುವ ನಾಟಕ ತಂಡಕ್ಕೆ ರೂ.33,333 ಹಾಗೂ ಮಂದಾರ ಪ್ರಶಸ್ತಿ, ದ್ವಿತೀಯ ರೂ.22,222 ಹಾಗೂ ಮಂದಾರ ಪ್ರಶಸ್ತಿ ಇದ್ದು, ಜೊತೆಗೆ ವೈಯಕ್ತಿಕ ಬಹುಮಾನ ಇರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಾಟಕೋತ್ಸವ ಕಾರ್ಯಕ್ರಮದ ಸಂಚಾಲಕ ಪ್ರವೀಣ್ ಇದ್ದರು.