ಬೆಳ್ತಂಗಡಿ : ವ್ಯಸನದಿಂದಾಗಿ ನಾವು ಮಾಡುವ ಎಲ್ಲಾ ದೋಷಗಳಿಗೆ ಮದ್ಯವರ್ಜನ ಶಿಬಿರಗಳಲ್ಲಿ ನಮಗಾಗುವ ಪರಿವರ್ತನೆಯೇ ಶಾಶ್ವತ ಪರಿಹಾರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾಯಿಲದದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ 170ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದಂದು ಆಗಮಿಸಿ ಮಾರ್ಗದರ್ಶನ ನೀಡಿದರು.
ನಾಟಕ, ಸಿನೆಮಾಗಳಲ್ಲಿ ಕುಡುಕರ ಪಾತ್ರವನ್ನು ಹಾಸ್ಯಕ್ಕಾಗಿ ಅಥವಾ ದ್ವೇಷ ಸಾಧನೆ ಮಾಡಲು ಬಳಸುತ್ತಾರೆ. ಕೊಲೆ, ಸುಲಿಗೆ, ಅತ್ಯಾಚಾರ, ವಂಚನೆ ಹಾಗೂ ಬಡತನದ ಕಾರಣಗಳಿಗೂ ಮದ್ಯಪಾನವೇ ಕಾರಣವಾಗುತ್ತದೆ. ತಾನು ಸೇವಿಸುವ ಅಮಲಿನ ವಸ್ತು ಸಿಗದೆ ಇದ್ದಾಗ ಎಷ್ಟೇ ಪ್ರಸಿದ್ಧತೆ ಹೊಂದಿದ ವ್ಯಕ್ತಿಯೂ ಸಹಾ ಭಿಕ್ಷೆ ಬೇಡಲೂ ಮುಂದಾಗುತ್ತಾನೆ. ಸಹಜ ಸ್ವಭಾವವನ್ನು ಮರೆತು ವ್ಯಕ್ತಿತ್ವವನ್ನು ಮರೆಮಾಚುವಂತೆ ಮಾಡುವ ವ್ಯಸನಗಳು ವ್ಯಕ್ತಿಗೆ ಮತ್ತು ಕುಟುಂಬಕ್ಕೆ ಶಾಪವಾಗಿ ಬದುಕುವಂತೆ ಮಾಡುತ್ತದೆ. ಮದ್ಯಪಾನದ ದುಶ್ಚಟಗಳು ಒಮ್ಮೆ ಚಟವಾಗಿ ಅಂಟಿಕೊಂಡರೆ ಜೀವನ ಪರ್ಯಂತ ನಮ್ಮನ್ನು ಆವರಿಸುತ್ತವೆ. ಆದುದರಿಂದ ಒಮ್ಮೆ ಬಿಟ್ಟವರು ಮತ್ತೊಮ್ಮೆ ಕುಡಿಯುವ ಪ್ರಯತ್ನ ಮಾಡಬಾರದು ಎಂದರು.
ಶಿಬಿರದಲ್ಲಿ ವಿವಿಧ ಜಿಲ್ಲೆಗಳ 87 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು.
ಈ ಸಂದರ್ಭದಲ್ಲಿ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಧರ್ಮಸ್ಥಳದ ಕೆ. ಮಹಾವೀರ ಅಜ್ರಿ ಉಪಸ್ಥಿತರಿದ್ದರು. ಚಿಕಿತ್ಸಾ ತಂಡದಲ್ಲಿ ಡಾ| ಶಿಶಿರ್ ಕುಮಾರ್ ದೇರಳಕಟ್ಟೆ, ಡಾ| ಸುನೀತಾ ಹಿರೇಮಠ್ ಹುಬ್ಬಳ್ಳಿ ಸುಮನ್ ಪಿಂಟೋ ಮಂಗಳೂರು, ಡಾ| ಪ್ರೌಸ್ಟಿನ್ ಉಜಿರೆ, ಡಾ| ಮೋಹನ್ದಾಸ್ ಗೌಡ ಕೊಕ್ಕಡ, ಡಾ| ಅರುಣ್ ಶಾಂತಿವನ, ಡಾ| ಪ್ರದೀಪ್ ನಾವೂರು ಸಹಕರಿಸಿದರು.
ಶಿಬಿರದಲ್ಲಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿಗಳಾದ ನಾಗರಾಜ್, ಆರೋಗ್ಯ ಸಹಾಯಕರಾದ ಶ್ರೀಮತಿ ನೇತ್ರಾವತಿ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:ಫೆ. 22ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.