ಮೈಸೂರು : ಮೈಸೂರು ಡಯಾಲಿಸಿಸ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಷನ್ (ಎಂಡಿಸಿಸಿಎ) ವತಿಯಿಂದ ಪವಿತ್ರ ತಪಸ್ಸು ಕಾಲದ ಗುಡ್ ಫ್ರೈಡೆ ಪ್ರಯುಕ್ತ ಸೇವಾ ಕಾರ್ಯವಾಗಿ ಮೈಸೂರಿನ ಸಾತ್ತಗಳ್ಳಿ ಯಲ್ಲಿನ ನಿವಾಸಿ ವಿಕ್ಟರ್ ರವರ ಮಗಳಿಗೆ ವೀಲ್ ಚೇರ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷರಾದ ಜೆ ಸ್ಟಿಫನ್ ಸುಜಿತ್ ಅವರು, ಕ್ರೈಸ್ತರಾದ ನಮಗೆ ಗುಡ್ ಫ್ರೈಡೆ ಒಂದು ಶುಭದಿನ. ಶುಭ ಶುಕ್ರವಾರದಂದು ಈ ಜಗತ್ತಿನ ರಕ್ಷಕರಾದ ಪ್ರಭು ಯೇಸು ಶಿಲುಬೆಯಲ್ಲಿ ಜೀವನವನ್ನು ಮಾನವಕುಲದ ರಕ್ಷಣೆಗಾಗಿ ಸಮರ್ಪಣೆ ಮಾಡಿದಂತಹ ದಿವ್ಯ ದಿನ. ಈ ದಿನದಂದು ಯಹೂದ್ಯರು ಯೇಸುವಿನ ಮಹತ್ಕಾರ್ಯಗಳನ್ನು, ಬಡವರ ಬಗ್ಗೆ ಇರುವ ಪ್ರೀತಿಯನ್ನು, ದೀನ ದಲಿತರಿಗೆ ಅವರು ಮಾಡುತ್ತಿದ್ದ ಸೇವೆಯನ್ನು, ವಿಶೇಷವಾಗಿ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಅವರು ಮಾಡುತ್ತಿದ್ದ ಸಂಘಟನೆಗಳನ್ನು ಸಹಿಸಲಾಗದೆ ರಾಜಕೀಯ ಮತ್ತು ಧಾರ್ಮಿಕ ವಿಷಯಗಳನ್ನು ಒಂದುಗೂಡಿಸಿ ಏಸುವನ್ನು ಶಿಕ್ಷಿಸುವ ಉದ್ದೇಶವನ್ನು ಹೊಂದಿ, ಸಮಾಜಘಾತುಕರಿಗೆ ಕೊಡುವಂತಹ ಒಂದು ಶಿಲುಬೆಯ ಮರಣವನ್ನು ರಕ್ಷಕರಿಗೆ ನೀಡಿದ ದಿನವಾಗಿದೆ ಎಂದರು.
ಕ್ರೈಸ್ತರಾದ ನಮಗೆ ಈ ದಿನ ಬಹಳ ಪವಿತ್ರವಾದ ದಿನ ನಮ್ಮ ಪಾಪಗಳಿಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಪ್ರಭುವಿನ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಅವರಿಗೆ ಕೃತಜ್ಞತಾ ಪೂರ್ವಕವಾಗಿ ಅವರು ನಡೆದ ಅದೇ ಶಿಲುಬೆ ಹಾದಿಯನ್ನು ಸಾಂಕೇತಿಕವಾಗಿ ನಡೆಸಿ ಇಡೀ ವಿಶ್ವಕ್ಕಾಗಿ ಪ್ರಾರ್ಥಿಸುವ ದಿನವಾಗಿದೆ. ಕ್ರೈಸ್ತರಾದ ನಾವೆಲ್ಲರೂ ಪ್ರಾರ್ಥನೆ ಮತ್ತು ಉಪವಾಸದ ಮೂಲಕ ವಿಶ್ವ ಕುಲಕ್ಕಾಗಿ ವಿಶೇಷವಾಗಿ ಶಾಂತಿ, ಸಮಾಧಾನ, ಸಹಬಾಳ್ವೆಗಾಗಿ ಪ್ರಾರ್ಥಿಸುತ್ತೇವೆ ಎಂದರು.
ಇವತ್ತಿನ ದಿನ ಯಾವುದೇ ಆಡಂಬರವಾಗಲಿ, ಸ್ನೇಹಕೂಟಗಳಾಗಲಿ ಆಚರಣೆಗಳಾಗಲಿ ಇರುವುದಿಲ್ಲ. ಇವತ್ತು ಮೌನ, ಧ್ಯಾನ ಮತ್ತು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಜೆ. ಸ್ಟೀಫನ್ ಸುಜೀತ್,ಉಪಾಧ್ಯಕ್ಷರು ಎಲ್ವಿನ್, ಕಾರ್ಯದರ್ಶಿ ಅಂಬ್ರೋಸ್ ಜಾರ್ಜ್, ಖಜಾಂಚಿ ಜಾನ್ಸನ್ ಬೆನ್ನ, ಮಾರಿಯಾ ಫ್ರಾನ್ಸಿಸಿ, ವಿನ್ಸೆಂಟ್ ಬ್ರಿಟೊ, ಸಿಂಧೂಜ, ಸಿಲ್ವೇಸ್ಟರ್ ಜೇಮ್ಸ್ ಉಪಸ್ಥಿತರಿದ್ದರು.