ಬೆಳ್ತಂಗಡಿ : ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸ್ವಚ್ಛತಾ ಆಂದೋಲನದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ 2009ರಲ್ಲಿ ಸಮೂಹ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದರು. ಸಾರ್ವಜನಿಕ ಸ್ಥಳಗಳಾದ ಬಸ್ಸ್ಟಾಂಡ್, ಮಾರುಕಟ್ಟೆ, ರಸ್ತೆಗಳಲ್ಲಿ ಈ ಸ್ವಚ್ಛತಾ ಅಭಿಯಾನ ಪ್ರಾರಂಭಗೊಂಡು ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದರು. ಈ ಯಶಸ್ವಿ ಅಭಿಯಾನವನ್ನು 2016ರಲ್ಲಿ ಧಾರ್ಮಿಕ ಶ್ರದ್ಧಾ
ಕೇಂದ್ರಗಳಿಗೆ ವಿಸ್ತರಿಸಿ, ಪ್ರತಿ ವರ್ಷ ಜನವರಿ ತಿಂಗಳ ಮಕರ ಸಂಕ್ರಾಂತಿ ದಿನದಂದು ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಯಾ ಊರಿನ ದೇಗುಲಗಳು ಹಾಗೂ ಶ್ರದ್ಧಾ ಕೇಂದ್ರಗಳ
ಸ್ವಚ್ಛತೆಯನ್ನು ಕೈಗೊಳ್ಳುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯದಾದ್ಯಂತ“ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮದಡಿಯಲ್ಲಿ “ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಎಂಬ ದಿಟ್ಟ
ನಿಲುವಿನೊಂದಿಗೆ ಶ್ರದ್ಧಾ ಕೇಂದ್ರಗಳ ಸ ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡು ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶ
ನೀಡಲಾಗಿದೆ.
ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಒಂದು ವಾರದ ಮೊದಲ್ಗೊಂಡು ರಾಜ್ಯದಾದ್ಯಂತ ಈ ಸ್ವಚ್ಛತಾ ಅಭಿಯಾನವು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿರುತ್ತದೆ. ಯೋಜನೆಯ ಕಾರ್ಯಕರ್ತರು, ಸದಸ್ಯರು ಹಾಗೂ ಸ್ವಯಂಸೇವಕರು ಈ ಒಂದು ವೈಶಿಷ್ಟ್ಯಪೂರ್ಣ ಸ್ವಚ್ಛತಾ ಅಭಿಯಾನದಲ್ಲಿ ತಮ್ಮ ತಮ್ಮ ಊರುಗಳಲ್ಲಿನ ದೇವಾಲಯ, ಮಂದಿರ ಹಾಗೂ ಇತರ ಶ್ರದ್ದಾ ಕೇಂದ್ರಗಳ ಸ್ವಚ್ಛತೆಯನ್ನು ಕೈಗೊಳ್ಳುವರು. ನಮ್ಮ ದೇಶವು 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವಕ್ಕೆ
ಕಾಲಿಡುತ್ತಿರುವ ಶುಭದಿನದಂದು ಯೋಜನೆಯ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೆ ಸುಮಾರು 75,000 ಕ್ಕೂ ಮಿಕ್ಕಿದ ದೇಗುಲಗಳು, ಮಂದಿರಗಳು ಶುಚಿತ್ವಗೊಂಡಿರುವುದು ವಿಶೇಷವಾಗಿರುತ್ತದೆ. ಈವರೆಗೆ 30 ಲಕ್ಷಕ್ಕೂ ಅಧಿಕ ಸೇವಾಕರ್ತರು ಈ ಸ್ವಚ್ಛತಾ ಸೇವೆಯನ್ನು ಸಲ್ಲಿಸಿರುತ್ತಾರೆ.
ಈ ಕುರಿತಂತೆ ಸ್ವಚ್ಛ ಭಾರತ ಅಭಿಯಾನದ ಹರಿಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ವರದಿಯನ್ನು ಸಲ್ಲಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್. ಮಂಜುನಾಥ್ರವರು ತಿಳಿಸಿರುತ್ತಾರೆ.