ಬೆಳ್ತಂಗಡಿ: ಮನುಷ್ಯ ಶ್ರೇಷ್ಠನಾಗಲು ಅವನ ಸಾಧನೆ, ಪರಿಶ್ರಮ,ಚಿಂತನೆಗಳೇ ತಳಹದಿ. ದೇವರು ವರ ಅಥವಾ ಶಾಪವನ್ನು ಕೊಡುವುದಿಲ್ಲ ಅವಕಾಶವನ್ನು ನೀಡುತ್ತಾನೆ. ಇದನ್ನು ಬಳಸಿಕೊಳ್ಳುವ ಛಲ ಮುಖ್ಯ, ಇದಕ್ಕೆ ಅತ್ಯುತ್ತಮ ಉದಾಹರಣೆ ಹರೇಕಳ ಹಾಜಬ್ಬನವರು ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅವರು ಮಂಗಳವಾರ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅಭಿನಂದನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಹಾಜಬ್ಬ ನವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರಂಗದಲ್ಲಿ ಮನುಷ್ಯತ್ವ ಇರುವವರು ಶ್ರೇಷ್ಠ ರಾಗಲು ಸಾಧ್ಯವಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ವಿಶಿಷ್ಟ ಶಕ್ತಿ ಯೋಚನೆಗಳು ಇರುತ್ತವೆ ಆದರೆ ಅದನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಭವಿಷ್ಯದ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಆಸ್ತಿಯಾಗಬೇಕು. ಇತರರನ್ನು ಅನುಕರಣೆ ಮಾಡದೆ ಸ್ವಂತಿಕೆಯಿಂದ ಮುಂದುವರಿದರೆ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಯೋಚನೆಗಳು ಮೂಡುತ್ತವೆ ಎಂದು ಅವರು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಸರಳ ಸಜ್ಜನಿಕೆ ಪ್ರಾಂಜಲ ಮನಸ್ಸಿನ ಹಾಜಬ್ಬನವರು ಎಲೆಮರೆಯ ಕಾಯಿಯಂತೆ ಇಂದು ಸಮಾಜಕ್ಕೆ ಸೇವೆ ನೀಡಿದ್ದಾರೆ. ಸಮಾಜಕ್ಕಾಗಿ ಸರ್ವಸ್ವವನ್ನು ಅರ್ಪಿಸಿರುವ ಇವರು ಇತರರಿಗೆ ಪ್ರೇರಣೆಯಾಗಿದ್ದಾರೆ. ಶಿಕ್ಷಣವಂಚಿತರಾಗ ಬೇಕಿದ್ದ ಅನೇಕರಿಗೆ ಇವರ ಸಾಧನೆ ದಾರಿದೀಪವಾಗಿದೆ. ಇದರಿಂದ ಇಂದು ಇವರನ್ನು ದೇಶವೇ ಗುರುತಿಸುವಂತಾಗಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಾಜಬ್ಬ ಸಾಮಾನ್ಯ ಮನುಷ್ಯನಾಗಿದ್ದ ನನ್ನನ್ನು ಗುರುತಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣವು ಪ್ರಮುಖ ಶಕ್ತಿಯಾಗಿದೆ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ಬೆಳ್ತಂಗಡಿ ಶಾಸಕರು ಸಂಘ ಸಂಸ್ಥೆ ಹಾಗೂ ನಾಗರಿಕರು ನೀಡಿದ ಅಭೂತಪೂರ್ವ ಸಹಕಾರವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳಿದರು.
ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಾರ್ಯಕ್ರಮ ಜರಗಿತು.
ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸತೀಶ್ಚಂದ್ರ ಮಡಂತ್ಯಾರು ಕಾಲೇಜಿನ ಪ್ರಿನ್ಸಿಪಾಲ್ ಡಾ. ಎಂ.ಎನ್. ಜೋಸೆಫ್,ಬೆಳ್ತಂಗಡಿ ಕಾಲೇಜಿನ ಪ್ರಿನ್ಸಿಪಾಲ್ ಆಂಟನಿ,ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ, ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಕಾರ್ಯದರ್ಶಿ ಅಬೂಬಕ್ಕರ್,ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.
ಡಾ. ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಹಾಜಬ್ಬನವರ ಹರೇಕಳ ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತ ನೀಡಲಾಯಿತು. ಇಲ್ಲಿಗೆ ಅಗತ್ಯವಿರುವ ಕೊಠಡಿಗೆ ತಾಲೂಕಿನ ದಾನಿಗಳ ಸಹಕಾರದಲ್ಲಿ 5 ಲಕ್ಷ ರೂ.ನೆರವು, ಬದುಕು ಕಟ್ಟೋಣ ಬನ್ನಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ10 ಜತೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಉಜಿರೆ ಗ್ರಾಮ ಪಂಚಾಯತಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕಾಜೂರು ದರ್ಗಾ ಶರೀಫ್ ವತಿಯಿಂದ ಹಾಜಬ್ಬ ಅವರನ್ನು ಅಭಿನಂದಿಸಿ ಶಾಲೆಗೆ ಆರ್ಥಿಕ ನೆರವನ್ನು ನೀಡಲಾಯಿತು.ವಿವಿಧ ಕಾಲೇಜಿನ ವಿದ್ಯಾರ್ಥಿ ನಾಯಕರು ಹರೇಕಳ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.