ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎಸ್. ನಾರಾಯಣ್ ಅವರ ಮನೆಯಲ್ಲಿ ಶುಭ ಸಮಾರಂಭ ನೆರವೇರಿದೆ. ಅವರ ಪುತ್ರ ಪಂಕಜ್ ನಾರಾಯಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ರಕ್ಷಾ ಜೊತೆ ಪಂಕಜ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಈಗ ಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಕೆಲವು ಗಣ್ಯರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಪಂಕಜ್ ಮತ್ತು ರಕ್ಷಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಲೆಬ್ರಿಟಿ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ ಕೊವಿಡ್ ಹರಡುವ ಭಯ, ಪುನೀತ್ ರಾಜ್ಕುಮಾರ್ ನಿಧನದ ನೋವು ಸೇರಿದಂತೆ ಹಲವು ಕಾರಣಗಳಿಂದಾಗಿ ಸಿಂಪಲ್ ಆಗಿ ಮದುವೆ ಮಾಡಲಾಗಿದೆ.
ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಅನೇಕರು ಆಗಮಿಸಿದ್ದರು. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮೂಲಕ ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಚಿತ್ರರಂಗದಲ್ಲಿ ಎಸ್. ನಾರಾಯಣ್ ಹೊಂದಿರುವ ಅನುಭವ ಅಪಾರ. ನಟನಾಗಿ, ನಿರ್ದೇಶಕನಾಗಿ ಅವರು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದಾರೆ. ಅವರ ಮಕ್ಕಳು ಕೂಡ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಪುತ್ರ ಪವನ್ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದಾರೆ. ಎರಡನೇ ಪುತ್ರ ಪಂಕಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಚೆಲುವಿನ ಚಿಲಿಪಿಲಿ’, ‘ದುಷ್ಟ’, ‘ದಕ್ಷ’, ‘ಒಡೆಯ’ ಮುಂತಾದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.