ಬೆಳ್ತಂಗಡಿ: ಮನುಷ್ಯನಿಗೆ ಕಣ್ಣು ದೇಹದ ಪ್ರಮುಖ ಅಂಗ. ಜೀವಿತದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಆಗಿಂದಾಗ ಕಣ್ಣು ಪರೀಕ್ಷೆ ಮಾಡಿಸಿ ಸುಸ್ಥಿತಿಯಲ್ಲಿರಿಸಿಕೊಳ್ಳಲು ಇಂತಹ ಶಿಬಿರಗಳು ಬಡ ಗ್ರಾಮೀಣ ಜನರಿಗೆ ತುಂಬಾ ಸಹಕಾರಿಯಾಗಿವೆ. ಗ್ರಾಮಾಂತರ ಪ್ರದೇಶದ ಎಲ್ಲರೂ ತಮ್ಮ ಕಣ್ಣುಗಳನ್ನು ಪರೀಕ್ಷಿಸಿ ,ಚಿಕಿತ್ಸೆಯ ಪ್ರಯೋಜನ ಪಡೆಯಬೇಕೆಂದು ಮಿಯಾರ್ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಗೋಪಿದಾಸ್ ನುಡಿದರು.
ಅವರು ಮೇ 20 ರಂದು ಪುದುವೆಟ್ಟು ಮಿಯಾರ್ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಸಭಾಭವನದಲ್ಲಿ ಉಜಿರೆ ರಾಮನಗರದ ಆದರ್ಶ ಸೇವಾ ಸಮಿತಿ ,ಬೆಳ್ತಂಗಡಿ ರೋಟರಿ ಕ್ಲಬ್ ,ರೋಟರಿ ಸೇವಾ ಟ್ರಸ್ಟ್ (ರಿ ),ಮತ್ತು ಶ್ರೀ ನಾರಾಯಣಗುರು ಬಿಲ್ಲವ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕ ,ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಬೊಲ್ಮನಾರು ಪ್ರಾಥಮಿಕ ಅರೋಗ್ಯ ಕೇಂದ್ರದ ಸಹಕಾರದೊಂದಿಗೆ ನಡೆದ ಉಚಿತ ನೇತ್ರ ಪರೀಕ್ಷೆ ಹಾಗು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೆನ್ ಲಾಕ್ ಆ ಸ್ಪತ್ರೆಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಅನಿಲ್ ರಾಣಾ ಜುನಂ ನೇತ್ರ ಚಿಕಿತ್ಸಾ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವೆನ್ ಲಾಕ್ ಆಸ್ಪತ್ರೆಯ ಲವೀನ ಅವರು ಅಂಗಾಂಗ ದಾನ ದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಎಂ.ವಿ.ಭಟ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಜಿರೆಯ ಆದರ್ಶ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಪ್ರಭು ,ಕಾರ್ಯದರ್ಶಿ ಜಯಂತ ಶೆಟ್ಟಿ ಕುಂಟಿನಿ ,ಬೆಳ್ತಂಗಡಿ ರೋಟರಿ ಕ್ಲಬ್ ಭಾವಿ ಅಧ್ಯಕ್ಷೆ ಮನೋರಮಾ ಭಟ್,ನೇತ್ರ ತಜ್ಞ ಡಾ!ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು . ಶಿಬಿರದಲ್ಲಿ ಪರಿಸರದ 114 ಮಂದಿ ನೇತ್ರ ತಪಾಸಣೆ ನಡೆಸಿ ಅವರಲ್ಲಿ 8 ಮಂದಿಗೆ ಚಿಕಿತ್ಸೆಗೆ ಶಿಫಾರಸು ಮಾಡಲಾಗಿ,80 ಮಂದಿಗೆ ರಿಯಾಯತಿ ದರದಲ್ಲಿ ಕನ್ನಡಕ ವಿತರಿಸಲಾಯಿತು. ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.