ಬೆಳ್ತಂಗಡಿ: ಮುಂಡಾಜೆ ಅಂಚೆ ಉಪಕೇಂದ್ರ ವ್ಯಾಪ್ತಿಯ ತೋಟತ್ತಾಡಿ ಶಾಖಾ ಅಂಚೆ ಕಚೇರಿಯ ಹಿಂಭಾಗ ಸೋಮವಾರ ಸಂಪೂರ್ಣ ಕುಸಿದು ಬಿದ್ದಿದೆ.
ಶಿಥಿಲಾವಸ್ಥೆ ತಲುಪಿದ್ದ ಬಾಡಿಗೆ ಕಟ್ಟಡವೊಂದರಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡದ ಸುತ್ತಲೂ ಮಳೆಯಿಂದ ರಕ್ಷಣೆಗೆ ತಾರ್ಪಲ್ ಹೊದಿಸಲಾಗಿತ್ತು. ಛಾವಣಿಯ ಹೆಂಚುಗಳು ಅಲ್ಲಲ್ಲಿ ಜಾರಿ ಮಳೆನೀರು ಕಛೇರಿ ಒಳಗೆ ಬೀಳುತ್ತಿತ್ತು. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದ ಕಟ್ಟಡದ ಹಿಂಭಾಗದ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ.ಇದರ ಜತೆ ಮಣ್ಣು ಸಹಿತ ಛಾವಣಿಯ ರೀಪು, ಪಕ್ಕಾಸು,ಹೆಂಚುಗಳು ಕೂಡ ಕಚೇರಿಯ ಒಳಭಾಗದಲ್ಲಿ ಬಿದ್ದಿವೆ. ಪೀಠೋಪಕರಣ ಹಾಗೂ ಕಪಾಟುಗಳಿಗೆ ಹಾನಿ ಉಂಟಾಗಿದೆ.
ಈ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಕಮ್ ಪೋಸ್ಟ್ ಮ್ಯಾನ್ ಆಗಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅಂಚೆ ಕಚೇರಿಯನ್ನು ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅತ್ಯಂತ ಶಿಥಿಲಾವಸ್ಥೆ ತಲುಪಿದ ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಇದುವರೆಗೆ ಸ್ಥಳಾಂತರಿಸದಿದ್ದುದು ವಿಪರ್ಯಾಸವಾಗಿದೆ.
ಅಂಚೆ ಕಚೇರಿಯ ದಾಖಲೆಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ಪುತ್ತೂರು ವಿಭಾಗದ ಅಂಚೆ ಅಧಿಕಾರಿಗಳು ತಿಳಿಸಿದ್ದಾರೆ.