ಬಾಗಲಕೋಟೆ : ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕಾರಿ ಗೋಶಾಲೆ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ರಾಜ್ಯದಲ್ಲಿ ಗೋಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರಕಾರ ಜಾರಿಗೆ ತಂದಿದೆ. ಇದಕ್ಕೆ ಪೂರಕವಾಗಿ ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆಗೆ ಸರಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಗೋಶಾಲೆ ಸ್ಥಾಪನೆಗೆ ಮೊದಲ ಆದ್ಯತೆ ನೀಡಬೇಕು. ಅದಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ವಿವಿಧ ಇಲಾಖೆಯ ಕಾರ್ಯಕ್ರಮಗಳೊಂದಿಗೆ ಒಗ್ಗೂಡಿಸಬೇಕು. ಹೊಸದಾಗಿ ಗೋಶಾಲೆ ಪ್ರಾರಂಭಕ್ಕೆ ಸಮಯಾವಕಾಶ ಬೇಕಾಗಿರುವದರಿಂದ ಸುತ್ತೋಲೆಯಲ್ಲಿ ಸೂಚಿಸಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭಿಸಲು ಆಸಕ್ತಿ ತೋರಿಸಿದಲ್ಲಿ ಅಂತವುಗಳನ್ನು ಗುರುತಿಸಿ ಖಾಸಗಿ ಸಹಭಾಗಿತ್ವದ ಸರ್ಕಾರಿ ಗೋಶಾಲೆಗಳಿಗೆ ಸರ್ಕಾರದಿಂದ ಕಳುಹಿಸುತ್ತಿರುವ ಜಾನುವಾರುಗಳನ್ನು ಸೇರ್ಪಡೆ ಮಾಡಲು ಮತ್ತು ಅವುಗಳಿಗೆ ಅವಶ್ಯವಿರುವ ಪ್ರತಿದಿನದ ನಿರ್ವಹಣೆ ವೆಚ್ಚವನ್ನು ಎನ್ಡಿಆರ್ಐ ಮಾರ್ಗಸೂಚಿಗಳನ್ವಯ ಗೋಶಾಲೆ ಪ್ರಾರಂಭಿಸಲು ತಿಳಿಸಿದರು. ಅದಕ್ಕೆ ಸಂಬಂಧಿಸಿದಂತೆ ಖಾಸಗಿ ಗೋಶಾಲೆಯೊಂದಿಗೆ ಸರ್ಕಾರದಿಂದ ಒಡಂಬಡಿಕೆ ಮಾಡಿಕೊಳ್ಳಲು ಸಭಾಧ್ಯಕ್ಷರು ಸೂಚಿಸಿದರು. ಸೇರ್ಪಡೆಯಾಗುವ ಜಾನುವಾರುಗಳ ದಾಖಲಾತಿ ನಿರ್ವಹಿಸಲು ಹಾಗೂ ಅವುಗಳ ಆರೋಗ್ಯ ಅಥವಾ ಅವಶ್ಯವಿರುವ ಚಿಕಿತ್ಸೆ ನೀಡಲು ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ ಜವಾಬ್ದಾರಿ ನೀಡಲು ಸಭೆ ತೀರ್ಮಾನಿಸಿತು.