ಮಂಗಳೂರು: ಲಿಟ್ ಫೆಸ್ಟ್ ೨೦೨೩ನಲ್ಲಿ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಅಶ್ವಿನಿ ಅಯ್ಯರ್ ತಿವಾರಿ ಮತ್ತು ಮಾಳವಿಕ ಅವಿನಾಶ್ ಅವರು ಸಿನೆಮಾ ಆಯ್ಯಂಡ್ ಕಲ್ಚರ್ ವೆನ್ ಲೋಕಲ್ ಈಸ್ ಯೂನಿರ್ವಸಲ್ ಕುರಿತು ಸಂವಾದ ನಡೆಸಿದರು.
ಮಾಳವಿಕ ಅವಿನಾಶ್ ಮಾತನಾಡಿ, ಸಿನಿಮಾ ಮತ್ತು ನಮ್ಮ ಸಂಸ್ಕೃತಿಯ ಕುರಿತು ನಾವು ಭಾರತೀಯರು ಎಲ್ಲರನ್ನೂ ನಮ್ಮವರು ಎಂದು ಭಾವಿಸುವವರು. ಏಳು ಲೋಕಗಳೂ ನಮ್ಮವು ಅಂತ ಅಂದುಕೊಳ್ಳುವವರು. ನಾವು ಕಥೆಗಾರರು. ಕಥೆಯನ್ನು ಹೇಳುವ ಹಲವು ಪ್ರಾಕಾರಗಳಿವೆ. ಎಲ್ಲದರ ಮೂಲ ಭರತನ ನಾಟ್ಯಶಾಸ್ತ್ರ. ರಾಮಾಯಣ – ಲವ ಮತ್ತು ಕುಶರು ಹೇಳುವ ಕಥೆ. ಮಹಾಭಾರತ. ಇವುಗಳ ಮೂಲ ವಿಶುವಲ್ ನರೇಶನ್ಗಳು. ರಿಷಬ್ ಅವ್ರೆ, ನೀವು ನಿಮ್ ನೆಲದ ಕಥೆಯನ್ನು ನಿಮ್ಮ ಭಾಷೆಯಲ್ಲಿ ಹೇಳ್ತೀರಿ. ಇದು ನಿಜವಾಗಿ ಜಾಗತಿಕ ಅಂತ ಅನ್ನಿಸುತ್ತಾ ಎಂದು ಪ್ರಶ್ನಿಸಿದರು.
ಪ್ರಕೃತಿ ಮಾತೆ ಆರಾಧನೆ ಜಾಗತಿಕ ವಿಚಾರ: ರಿಷಬ್ ಮಾತನಾಡಿ, ನನಗೆ ಅಜ್ಜಿಕಥೆ ಮೇಲೆ ನಂಬಿಕೆ ಜಾಸ್ತಿ. ವೆಸ್ಟರ್ನ್ ಅಜ್ಜಿ ಇರಬಹುದು ಅಥವಾ ಇಲ್ಲಿಯವೃೇ ಇರಬಹುದು. ನಾನು ಓದುವುದರಲ್ಲಿ ಹಿಂದೆ. ಆದರೆ ಪುರಾಣ ಕಥೆಗಳ ಪ್ರತಿಗಳು ಜನಪದದಿಂದ ಸಿಗುತ್ತಿದೆ. ಭಾರತದ ಪ್ರತಿ ಮೂಲೆಯಲ್ಲಿ ಪ್ರಕೃತಿ ಮಾತೆಯನ್ನ, ಶಕ್ತಿಯನ್ನ ಆರಾಧನೆ ಮಾಡುವ ಕ್ರಮವಿದೆ. ಇದು ಪ್ರಪಂಚದ ಯಾವುದೇ ಮೂಲೆಗೆ ಹೋದ್ರೂ ಇದೆ. ಹಾಗಾಗಿ ಇದು ಜಾಗತಿಕವೇ. ಅಮ್ಮನ ಪ್ರೀತಿ ಜಾಗತಿಕವಾಗಿ ಇರುವುದು ಎಂದರು.
ನಮ್ಮ ನೆಲದ ಕಥೆ ಹೇಳುವಾಗ, ಇದು ಜಾಗತಿಕ ಅನ್ಸುತ್ತ ಅಥವ ನಾವು ವಿಪರೀತ ಮಮಕಾರ ತೋರಿಸುತ್ತೇವೆಯೇ ಎಂಬ ಪ್ರಶ್ನೆಗೆ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯೆ ನೀಡಿ ನಾವು ಯಾವುದೇ ನೆಲದಲ್ಲಿ ಇದ್ರೂ, ಸೆಂಟರ್ ಆಫ್ ಅರ್ಥ್ನಲ್ಲಿ ಇರ್ತಾವೆ. ನಾವು ಜಗತ್ತನ್ನು ನೋಡುವುದು ನಮ್ಮ ಭಾಷೆಯ ಮೂಲಕ, ಪ್ರಾದೇಶಿಕತೆಯ ಮೂಲಕ. ಒಬ್ಬ ವ್ಯಕ್ತಿ ಅಭಿವ್ಯಕ್ತಿಗೆ ಅವಕಾಶ ಆಗುವುದು ಪ್ರಾದೇಶಿಕತೆಯಿಂದ. ಭಾರತದಲ್ಲಿ ಎಲ್ಲಿ ಹೋದರೂ ಕೆಲವೊಂದು ರೀತಿಯ ಆರಾಧನೆಗಳಿವೆ. ಅದೇ ರೀತಿ ಇರುವ ಇತರ ರಾಷ್ಟ್ರಗಳಿಗೂ ಇದು ಸಲ್ಲುತ್ತದೆ.
ಪ್ರಾದೇಶಿಕ ಸಂಸ್ಕೃತಿಗೆ ರಾಷ್ಟ್ರಮನ್ನಣೆ: ನಾವು ನಮ್ಮ ಕಥೆಗಳನ್ನು ಹೇಳ್ತೇವೆ. ನಿಮ್ಮ ಪ್ರಕಾರ ಇದು ಜಾಗತಿಕ ಮಟ್ಟಕ್ಕೆ ತಲುಪುತ್ತೆ ಅನ್ನಿಸುತ್ತಾ ಎಂದು ಅಶ್ವಿನಿ ಅಯ್ಯರ್ ತಿವಾರಿ ಅವರಿಗೆ ಕೇಳಿದ ಪ್ರಶ್ನೆಗೆ ನಾನು ಬರೆಲಿ ಕಿ ಬರ್ಫಿ ಎಂಬ ಸಿನಿಮಾ ಮಾಡಿದೆ. ನಾವು ಕಲ್ಚರ್ ಅನ್ನು ಜನಪದ ಕಥೆ ಮೂಲಕ ಹೇಳಿಲ್ಲ. ನಾನು ರೂರಲ್ ಭಾರತದ ಕಥೆಯ ಮೂಲಕ ಹೇಳಿದೆ. ಆಹಾರ, ಬಟ್ಟೆ ಪ್ರಾದೇಶಿಕವಾಗಿ ಇಂಥ ಅಂಶಗಳಿಂದ ಹೇಳಿದ್ದೇನೆ. ನಮ್ಮ ಹೆತ್ತವರು ನಮ್ಮನ್ನು ಚೆನ್ನಾಗಿ ಓದಬೇಕು ಅಂತ ಹೇಳ್ತಿದ್ರು. ನಾನು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದಾಗ ಅಮ್ಮ ಊರಿಗೆಲ್ಲ ಫೋನ್ ಮಾಡಿ ಹೇಳಿದ್ದಳು. ಮೊದಲೆಲ್ಲ ಹೊರಗೆ ಹೋಗುವಾಗ, ಜೀನ್ಸ್ ಇತ್ಯಾದಿ ಧರಿಸಬೇಕಿತ್ತು. ಈಗ ಹಾಗಿಲ್ಲ. ನಾನು ಸೀರೆ ಉಟ್ಟರೂ ಹೊರಗಿನವಳಂತೆ ಯಾರೂ ನೋಡುವುದಿಲ್ಲ. ನಾವು ಯುವಜನತೆ ನಮ್ಮ ಸಂಸ್ಕೃತಿಯನ್ನು ಹೆಗಲ ಮೇಲೆ ಹೊತ್ತು ನಡೆಯಬೇಕು ಎಂದರು.
ಜನರಿಂದ ಸಿನಿಮಾ ಯಶಸ್ಸು: ನೀವು ಈ ಹಿಂದೆ ಮಾಡಿದ ಸಿನಿಮಾಗಳೂ ನೆಲದ ಕಥೆ ಹೇಳಿವೆ. ಕಾಂತಾರ ಮಾತ್ರ ಜಾಗತಿಕ ಮಟ್ಟಕ್ಕೆ ಹೋಯ್ತು. ನೀವು ವಿಶೇಷ ಪ್ರಯತ್ನ ಮಾಡಿದ್ರ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಬ್, ಜನ ಅದನ್ನು ಆ ಮಟ್ಟಕ್ಕೆ ತಗೊಂಡು ಹೋದ್ರು. ನಮ್ಮ ಕೆಲಸ ಎಲ್ಲಾ ಸಿನಿಮಾಗಳಿಗೂ ಒಂದೇ ರೀತಿಯದ್ದು. ಇದು ನಮ್ಮಲ್ಲಿನ ಹಿಂದುಳಿದ ಸಮುದಾಯದ, ಕಾಡಂಚಿನ ಮಕ್ಕಳ ಕಥೆ. ಈಗ ಜನ ತುಂಬ ಸೆನ್ಸಿಟಿವ್ ಆಗಿದಾರೆ. ಎಲ್ಲೂ ಜಾತಿ ಬಗ್ಗೆ ಹೇಳಿಲ್ಲ. ಒಬ್ಬ ನಿರ್ದೇಶಕನಾಗಿ ಇಷ್ಟು ದೊಡ್ಡ ಬಜೆಟಿನ ಕಥೆ ಮೊದಲಿಗೆ ಮಾಡಿದೆ. ೭ ಭಾಷೆಗಳಲ್ಲಿ ಬಂದಿದೆ ಎಂದರು.
ಅರಣ್ಯ ಇಲಾಖೆ ರಚನೆಗೆ ಮೊದಲು ಸಮೃದ್ಧ ಅರಣ್ಯ: ಪ್ರಕಾಶ್ ಬೆಳವಾಡಿ ಮಾತನಾಡಿ, ಇವತ್ತಿನ ದೃಶ್ಯಾವಳಿಯೇ ಬದಲಾಗಿದೆ. ಕಲಾತ್ಮಕ ಸಿನಿಮಾ ಯಶಸ್ವಿಯಾಗಿದೆ. ಯಾರು ತಾವೇ ಭಾರತದ ಪ್ರತಿನಿಧಿ ಅಂದ್ಕೊಂಡಿದ್ರೋ ಅವ್ರಿಗೆ ಮುಖಭಂಗ ಆಗಿದೆ. ಒಂದು ಕಲಾತ್ಮಕ ಸಿನಿಮಾ ಮಾಡಿ, ಬೇರೆ ಬೇರೆ ಫೆಸ್ಟಿವಲ್ಗಳಿಗೆ ಕಳುಹಿಸಿದಾಗ ಅದು ಜಾಗತಿಕವಾಗುತ್ತ ಅಥವಾ ಈ ರೀತಿ ಮೈಕ್ರೂಲೋಕಲ್ ಸಿನಿಮಾ ಗ್ಲೋಬಲ್ ಆಗುತ್ತೋ? ಅದು ಜನರ ಯೋಚನೆಗಳ ಮೇಲೆ ಅವಲಂಬಿತವಾಗುತ್ತೆ. ಫಾರೆಸ್ಟ್ ಡಿಪಾರ್ಟ್ಮೆಂಟ್ ಬರುವ ಮುಂಚೆ ಭಾರತದಲ್ಲಿ ಕಾಡು ಚೆನ್ನಾಗಿತ್ತು. ಕಾಡನ್ನು ಆರಾಧಿಸುವ ಜನರಿಗೆ ಕಾಡನ್ನು ಕಾಪಾಡುವುದೂ ಗೊತ್ತು.
ದೇಶಿ ಸಂಸ್ಕೃತಿಗೆ ಸಿನಿಮಾ ಕಥೆ ಕನೆಕ್ಟ್ ಆಗಲಿ: ಅಶ್ವಿನಿ ಮಾತನಾಡಿ, ನಾವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ನೀವು ಕಥೆಯನ್ನು ಹೇಳುವಾಗ ನಿಮಗೆ ಕಂಫರ್ಟೇಬಲ್ ಇರುವ ಭಾಷೆಯಲ್ಲಿ ಹೇಳಿ ಅಂತ ಹೇಳ್ತೇವೆ. ಪ್ರಾದೇಶಿಕ ಕಥೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಹೇಳಿದರೇ ಅದು ಪರಿಣಾಮಕಾರಿಯಾಗುವುದು. ಈಗ ನಾವು ಅದನ್ನು ಬೇರೆ ಭಾಷೆಗಳಿಗೆ ಡಬ್ ಮಾಡಬಹುದು. ಪ್ರಾದೇಶಿಕತೆಯನ್ನು ಹೇಳುವುದು ಬಾಲಿವುಡ್ನಲ್ಲಿ ಎಷ್ಟು ಕಷ್ಟ ಎಂಬ ಪ್ರಶ್ನೆಗೆ ಅಶ್ವಿನಿ ಅವರು ಬರೇಲಿ ಕಿ ಬರ್ಫಿ ಮಾಡುವಾಗ ಅನೇಕರು ಹೇಳಿದ್ದರು, ಇದು ವರ್ಕ್ ಆಗಲ್ಲ ಅಂತ. ಆದ್ರೆ ಆಮೇಲೆ ಪ್ರತಿಯೊಬ್ಬರೂ ತಮ್ಮ ಕಥೆಯನ್ನು ಅದರಲ್ಲಿ ಕಂಡರು. ನಾವು ಕಥೆ ಮಾಡುವಾಗ ನಮ್ಮ ಸಂಸ್ಕೃತಿಗೆ ಕನೆಕ್ಟ್ ಆಗುವ ರೀತಿಯಲ್ಲಿ ಮಾಡಬೇಕು. ಅದ್ರಲ್ಲೂ ವಿಶೇಷವಾಗಿ, ಭಾರತದಿಂದ ನಮ್ಮ ಕಥೆಯನ್ನು ಜಗತ್ತಿಗೆ ಹೇಳುವಾಗ ಜಾಸ್ತಿ ವರ್ಕ್ ಮಾಡಬೇಕು.
ಸಮಾಜಕ್ಕೆ ಸಂದೇಶ ಕೊಡ್ಬೇಕು ಅಂತ ಬರೀತಿರ?
ರಿಶಬ್: ಇಲ್ಲ. ಹಾಗೇನಿಲ್ಲ. ಕಾಂತಾರದಲ್ಲಿ ಅದ್ಹೇಗೆ ಫಾರೆಸ್ಟಿನವರು ಬಂದು ಜೊತೆಗೆ ಸೇರ್ತಾರೆ ಅಂತ ಅನೇಕರು ಕೇಳ್ತಾರೆ. ಆದ್ರೆ ಈ ಸಿನಿಮಾದ ಮೂಲಕವಾದ್ರೂ ಹಾಗಾಗ್ಲಿ ಅಂತ ಹೇಳಿದ್ದು. ನಾವು ನಮ್ಮ ಕಥೆಗಳನ್ನು ಹೇಳ್ತೇವೆ. ನಾವು ಎಷ್ಟು ರೀಜನಲ್ ಆಗ್ತೇವೋ ಆಗ ಅದು ಜನರಿಗೆ ತಲುಪುತ್ತದೆ. ಈ ರೀತಿಯ ರೀಜನಲ್ ಕಥೆಗಳು ಓಟಿಟಿಯಲ್ಲಿ ಎಲ್ಲೂ ಸಿಗುವುದಿಲ್ಲ. ಹಾಗಾಗಿ ಜನ ನೋಡ್ತಾರೆ.
ಮಾಳವಿಕ: ಕಥೆ ಕಳ್ಳತನ ಮಾಡುವವರಿಗೆ ಇವತ್ತಿನ ಪರಿಸ್ಥಿತಿಯಲ್ಲಿ ಭವಿಷ್ಯ ಇದೆಯ?
ಪ್ರಕಾಶ್: ರಿಮೇಕ್ ಫಿಲ್ಮ್ ವರ್ಕ್ ಆಗುತ್ತೆ. ಆದ್ರೆ ಒರಿಜಿನಲ್ ಸಿನೆಮ ನೋಡಿದ್ರೆ ರಿಮೇಕ್ ವರ್ಕೌಟ ಈ ಆಗಲ್ಲ. ಸ್ವಂತ ಅನುಭವದಿಂದ ಬರೆದ ಕಥೆ ಅತ್ಯುತ್ತಮವಾಗಿರುತ್ತೆ. ಸಾಂಸ್ಕೃತಿಕ ಸ್ವಂತಿಕೆ ಇದ್ದಾಗ ಚೆನ್ನಾಗಿ ಮೂಡಿಬರ್ತದೆ. ಸಿನಿಮಾ ಹಾಡುಗಳು- ಸಂದರ್ಭಕ್ಕೆ ತಕ್ಕಂತೆ ಬರೆಯುತ್ತಿದ್ದರು. ಅದನ್ನು ಬೇರೆ ಕಡೇ ಉಪಯೋಸಲಾಗುವುದಿಲ್ಲ. ಆದ್ರೆ ಜನರಿಕ್ ಆದ ಹಾಡುಗಳನ್ನು ಎಲ್ಲಿ ಬೇಕಾದ್ರೂ ಉಪಯೋಗ ಮಾಡ್ಬಹುದು. ಕನ್ನಡ ಸಿನಿಮಾ ನೆನಪಾಗುವುದು ಹಳೆ ಹಾಡುಗಳಿಂದ. ಆದರೆ ಆಧುನಿಕ ಹಾಡುಗಳು ಹಾಗಿಲ್ಲ. ಭಾರತವನ್ನು ಸಾಫ್ಟ್ಪವರ್ ಮೂಲಕ ಆಕ್ರಮಣ ಮಾಡ್ತಿದ್ದಾರೆ. ನಾವು ಒಳಗಿಂದ ವಿಭಜನೆ ಮಾಡಲು ಬಿಡಬಾರದು.
ಕೊನೆಯ ಎರಡು ಮಾತುಗಳು:
ಅಶ್ವಿನಿ: ನೀವು ಎಲ್ಲಿದ್ದೀರಿ? ಎಲ್ಲಿಂಡ ಬಂದಿದ್ದೀರಿ? ಎಂಬುದು ಮುಖ್ಯವಲ್ಲ. ಹೇಳುವ ಕಥೆಯನ್ನು ಕಷ್ಟಪಟ್ಟು ಹೇಳಿದಾಗ ಯಶಸ್ಸು ಸಿಗುತ್ತೆ.
ರಿಷಬ್: ಯಶಸ್ಸು ಎಂಬುದು ಬಹಳ ಅಪಾಯಕಾರಿ. ಮೊದಲಿನ ಹಾಗೆ ಅದೇ ಸಹಜತೆಯಿಂದ ಕೆಲಸ ಮಾಡ್ತಿದ್ದೇನೆ. ಶೇ ೯೯.೯೯ ಜನ ಆಶೀರ್ವಾದ ಮಾಡಿದಾಗ, ೦.೦೧ ಜನರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಭಾರತ ಅತ್ಯಂತ ವೈವಿಧ್ಯಮಯವಾದದ್ದು. ೨೦-೩೦ ಕಿ.ಮೀ. ಗೊಮ್ಮೆ ಭಾಷೆ ಬದಲಾಗ್ತದೆ, ಆಹಾರವೂ ಬದಲಾಗ್ತದೆ. ಎಲ್ಲಾ ಭಾಗದಿಂದಲೂ ಬರಹಗಾರರು ಬರಬೇಕು.