ಮಂಗಳೂರು: ಇಂದು ಶನಿವಾರ (ಫೆ.18)ರಂದು ದೇಶದೆಲ್ಲೆಡೆ ಶಿವರಾತ್ರಿಯ ಸಂಭ್ರಮ ಮನೆಮಾಡಿದೆ. ಅಂತೆಯೇ ಕರಾವಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡದ ಕದ್ರಿ, ಕುದ್ರೋಳಿ, ಸೋಮೇಶ್ವರ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರಿಂಜೇಶ್ವರ ಜಾತ್ರಾ ಸಂಭ್ರಮಕ್ಕೆ ನಾಡಿನ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕಾರಿಂಜೇಶ್ವರನ ದರ್ಶನ ಪಡೆದು ಪುನೀತರಾಗುವುದು ವಾಡಿಕೆ.
ಧರ್ಮಸ್ಥಳಕ್ಕೆ ಪಾದಯಾತ್ರೆ: ಧರ್ಮಸ್ಥಳ ಕ್ಷೇತ್ರಕ್ಕೆ ಶಿವರಾತ್ರಿ ಸಮಯದಲ್ಲಿ ನಾಡಿನೆಲ್ಲೆಡೆಯ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ. ಸಹಸ್ರಾರು ಭಕ್ತರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. 50 ಸಾವಿರ ಪಾದಯಾತ್ರಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಚಾರ್ಮಾಡಿ, ಶಿರಾಡಿ ಹೆದ್ದಾರಿ ಇಕ್ಕೆಲಗಳಲ್ಲಿಸ್ವಚ್ಛತೆ ಕಾಪಾಡುವಂತೆ 55 ಕಡೆ ಕ್ಷೇತ್ರದಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.