ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಹೊಟೇಲ್ವೊಂದರ ಕ್ಲೀನರ್ ನ ಮೃತ ದೇಹ ಇಲ್ಲಿನ ಅರುಣಾ ಚಿತ್ರಮಂದಿರದ ಬಳಿಯ ಎಪಿಎಂಸಿ ರಸ್ತೆಗೆ ತೆರಳುವ ಬಳಿ ಇರುವ ಸರಕಾರಿ ಬಾವಿಯಲ್ಲಿ ಎ.18ರಂದು ಪತ್ತೆಯಾಗಿದೆ.
ಅಜ್ಜಿಕಲ್ಲು ನಿವಾಸಿ ಲಿಂಗಪ್ಪ ಪೂಜಾರಿ(40ವ) ಎಂಬವರು ಮೃತಪಟ್ಟವರು. ಮೂಗನಾಗಿದ್ದ ಅವರು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಹೊಟೇಲ್ ಶ್ರೀಲಕ್ಷ್ಮೀಯಲ್ಲಿ ಹಲವಾರು ವರ್ಷಗಳಿಂದ ಕ್ಲೀನರ್ ಆಗಿ ದುಡಿಯುತ್ತಿದ್ದು, ಏ.16ರಂದು ರಾತ್ರಿ ಪುತ್ತೂರು ಜಾತ್ರೆಗೆ ಹೋಗುತ್ತೇನೆಂದು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಹೊಟೇಲ್ನ ಮಾಲಕರು ಮತ್ತು ಸಿಬಂದಿ ಹುಟುಕಾಟ ನಡೆಸಿದ್ದರು. ಏ.18ರಂದು ಅರುಣಾ ಚಿತ್ರ ಮಂದಿರದ ಬಳಿಯ ಸರಕಾರಿ ಬಾವಿಯಲ್ಲಿ ಪಕ್ಕದ ಕೋಳಿ ಅಂಗಡಿಯವರು ಬಾವಿಯಿಂದ ನೀರು ತೆಗೆಯಲೆಂದು ತಂಬಿಗೆಯನ್ನು ಬಾವಿಗೆ ಇಳಿಸಿದಾಗ ಬಾವಿಯಲ್ಲಿ ಮೃತ ದೇಹ ಇರುವುದು ಪತ್ತೆಯಾಗಿದೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಅಗ್ನಿಶಾಮಕ ದಳದವರು ಬಂದು ಬಾವಿಯಿಂದ ಮೃತ ದೇಹ ಮೇಲಕ್ಕೆ ತೆಗೆದಾಗ ಮೃತ ದೇಹ ಲಿಂಗಪ್ಪ ಪೂಜಾರಿ ಅವರದ್ದು ಎಂದು ಸ್ಥಳೀಯರು ಗುರುತಿಸಿದರು. ಬಳಿಕ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು. ಮೃತರು ಪತ್ನಿ ಗಿರಿಜಾ, ಪುತ್ರ ಮತ್ತು ಮೂವರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.