ಕುಂದಾಪುರ: ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ಮಲಗಿದ್ದಲೇ ಇದ್ದ ಯುವಕನೊಬ್ಬ ಆ್ಯಂಬುಲೆನ್ಸ್ ನಲ್ಲಿ ಬಂದು ಮತ ಚಲಾಯಿಸಿರುವ ಘಟನೆಯು ಕುಂದಾಪುರದ ಉಳ್ತೂರಿನಲ್ಲಿ ನಡೆದಿದೆ.
ಹೀಗೆ ಆ್ಯಂಬುಲೆನ್ಸ್ ನಲ್ಲಿ ಬಂದು ಸ್ಟ್ರೆಚರ್ ಮೂಲಕ ಮತಗಟ್ಟೆಯ ಒಳಗೆ ಹೋದವರು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರಿನ ಶಿವಪ್ಪ ಎಂಬವರ ಪುತ್ರ ಜಯಶೀಲ ಪೂಜಾರಿ.
ಜಯಶೀಲ ಅವರು ಹತ್ತು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿದ್ದರು ಮತ್ತು ಮೂರು ತಿಂಗಳ ಕಾಲ ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿದ್ದರು. ಇಂದು ಮತದಾನ ಮಾಡಬೇಕೆಂದು ತನ್ನ ಇಚ್ಛೆ ವ್ಯಕ್ತಪಡಿಸಿದ ಜಯಶೀಲ ಅವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಎದ್ದು ನಿಲ್ಲಲು ಸಾಧ್ಯವಾಗದ ಜಯಶೀಲ ಅವರು ಆ್ಯಂಬುಲೆನ್ಸ್ ನಲ್ಲಿ ಮತಗಟ್ಟೆಗೆ ಬಂದು ಸ್ಟ್ರೆಚ್ಚರ್ ನಲ್ಲಿ ಮಲಗಿಕೊಂಡೇ ಮತ ಚಲಾಯಿಸಿದರು. ಮತ ಚಲಾಯಿಸದೆ ರಜೆಯ ಮಜಾ ಉಡಾಯಿಸುವ ಯುವಕರಿಗೆ ಈತ ಮಾದರಿಯಾಗಿದ್ದಾನೆ.