ಪುತ್ತೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಸೂಚನೆಯಂತೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಧಾರ್ಮಿಕ ಮಂದಿರಗಳಾದ ದೇವಸ್ಥಾನ, ಮಸೀದಿ, ಚರ್ಚ್, ಬಸದಿ, ಭಜನಾ ಮಂದಿರಗಳಲ್ಲಿ ಭದ್ರತೆಯ ದೃಷ್ಟಿಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಇದಕ್ಕೆ ಪೂರಕವಾಗಿ ಎಲ್ಲಾ ಧಾರ್ಮಿಕ ಮಂದಿರಗಳ ಮುಖ್ಯಸ್ಥರ ಸಭೆಯು ಏ.26ರಂದು ಬೆಳಿಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಅವರೊಂದಿಗೆ ಭದ್ರತೆಯ ಕುರಿತು ಚರ್ಚಿಸಿಲಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಶಿಕುಮಾರ್ ಅವರು ಮಾತನಾಡಿ ತಮ್ಮ ತಮ್ಮ ಧಾರ್ಮಿಕ ಮಂದಿರಗಳಲ್ಲಿ ಸಿ.ಸಿ.ಕ್ಯಾಮರವನ್ನು ಈಗಾಗಲೇ ಅಳವಡಿಕೆ ಮಾಡಿರಬಹುದು. ಆದರೆ ಉತ್ಸವ ಅಥವಾ ಇತರ ಕಾರ್ಯಕ್ರಮದ ಸಂದರ್ಭ ಮಂದಿರಗಳ ವಠಾರದಲ್ಲಿ ಜನ ಜಮಾವಣೆಗೊಳ್ಳುವಂತಹ ಸಂದರ್ಭದಲ್ಲಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಕ ಮಾಡಬೇಕು. ಆತ ಕಟ್ಟಡದ ಪ್ರವೇಶ ದ್ವಾರದಲ್ಲಿ ಸರಿಯಾಗಿ ಪರಿಶೀಲಿಸುವ ಕೆಲಸ ನಿರ್ವಹಿಸಬೇಕೆಂದು ಹೇಳಿದ ಅವರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಸುಮಾರು 40ಕ್ಕೂ ಅಧಿಕ ಧಾರ್ಮಿಕ ಮಂದಿರಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.