ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲೆಕ್ಕಪರಿಶೋಧನೆಗಾಗಿ ಹಣದ ಬೇಡಿಕೆ ಇಟ್ಟ ಕಾಲೇಜು ಶಿಕ್ಷಣ ಇಲಾಖೆ ಲೆಕ್ಕಪರಿಶೋಧಕ ಹಣ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಸುರತ್ಕಲ್ನಲ್ಲಿ ಏ.26ರಂದು ನಡೆದಿದೆ.
ಬೆಂಗಳೂರಿನ ಕಾಲೇಜುನ ಶಿಕ್ಷಣ ಇಲಾಖೆ ಲೆಕ್ಕಾಧೀಕ್ಷಕ ಲೊಕೇಶ್ ಎಂಬವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ಬಂಧನಕ್ಕೊಳಗಾದವರು. ಭ್ರಷ್ಟಾಚಾರ ನಿಗ್ರಹದಳ ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್, ಮೋಹನ್ ಕೊಟ್ಟಾರಿ ಮತ್ತು ಸಿಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ ಎ, ಪ್ರಶಾಂತ್, ರಾಧಾಕೃಷ್ಣ ಕಿನ್ನಿಂಜಾಲು, ಉಮೇಶ್, ವೈಶಾಲಿ, ನಯನಾ, ಚಾಲಕರಾದ ರಾಕೇಶ್, ಗಣೇಶ್, ರಾಜೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಘಟನೆಯ ಕುರಿತು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಮಾಹಿತಿ ನೀಡಿದ್ದು ಹೀಗೆ…
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಅವರು ದೂರು ದಾರರಾಗಿದ್ದು, ಕಾಲೇಜಿನ ಲೆಕ್ಕಪರಿಶೋಧನೆಗಾಗಿ ಏ.22 ರಿಂದ 24 ತನಕ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕ ಲೊಕೇಶ್ ಅವರು ಬೆಟ್ಟಂಪಾಡಿ ಕಾಲೇಜಿಗೆ ಬಂದಿದ್ದ ವೇಳೆ ಕಾಲೇಜಿ ಕಚೇರಿ ಕಡತಗಳು ಸರಿಯಾಗಿಲ್ಲ. ಜೊತೆಗೆ ಪ್ರಾಂಶುಪಾಲರ ಪಿಂಚಣಿಗಾಗಿಯೂ ಕ್ಲೀಯರೆನ್ಸ್ ಪ್ರಮಾಣ ಪತ್ರ ನೀಡಬೇಕಾದರೆ ರೂ. 2.5ಲಕ್ಷ ನೀಡುವಂತೆ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಅವರಲ್ಲಿ ಬೇಡಿಕೆ ಇಟ್ಟಿದ್ದರು.
ಈ ಕುರಿತು ರಾಧಾಕೃಷ್ಣ ಅವರು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಲೆಕ್ಕಾಧೀಕ್ಷಕ ಲೊಕೇಶ್ ಅವರು ಏ.26ಕ್ಕೆ ಸುರತ್ಕಲ್ನ ಸದಾನಂದ ಹೊಟೇಲ್ ಬಳಿ ಹಣ ನೀಡುವಂತೆ ತಿಳಿಸಿದ್ದರು. ಅದರಂತೆ ಪ್ರಾಂಶುಪಾಲ ರಾಧಾಕೃಷ್ಣ ಅವರು ಸುರತ್ಕಲ್ಗೆ ತೆರಳಿದ್ದರು. ಅಲ್ಲಿ ಲೆಕ್ಕಾಧೀಕ್ಷಕ ಲೊಕೇಶ್ ಅವರು ತನ್ನ ಕಾರಿನೊಳಗೆ ಕುಳಿತು ರಾಧಾಕೃಷ್ಣ ಅವರಿಂದ ಹಣ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ದಾಳಿ ನಡೆಸಿ ನಗದು ಹಣವನ್ನು ವಶಕ್ಕೆ ಪಡೆದು ಕೊಂಡು ಲೊಕೇಶ್ ಅವರನ್ನು ಬಂಧಿಸಿದ್ದಾರೆ.