ಬೆಳ್ತಂಗಡಿ: ಶಬರಿಮಲೆಯಲ್ಲಿ ಹಿರಿಯರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವುದೇ ಉತ್ತಮ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈ ಕ್ಷೇತ್ರದ ಮಹತ್ವವೇ ಮನೋನಿಗ್ರಹ ಮತ್ತು ವೃತಾಚರಣೆಯಾಗಿದೆ. 48 ದಿನಗಳ ಕಠಿಣ ವ್ರತವನ್ನು ಅನುಸರಿಸಿ ಮನಶುದ್ದಿಯನ್ನು ಪಡೆದು ಶಬರಿಮಲೆಗೆ ಹೋಗಿ ದರ್ಶನ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು. ಆದರೆ ಇದೀಗ ಅದನ್ನೆಲ್ಲ ಬದಲಿಸಿ ನಾಲ್ಕುದಿನ ಎರಡು ದಿನ ವೃತಮಾಡಿ ಶಬರಿಮಲೆಗೆ ಹೋಗುತ್ತಿದ್ದಾರೆ, ಇದು ಸರಿಯಲ್ಲ. ಇಲ್ಲಿ ಹಿರಿಯರು ಹಾಕಿಕೊಂಡು ಬಂದಿರುವ ಸಂಪ್ರದಾಯಗಳು ಉಳಿದರೆ ಅದೇ ಒಳ್ಳೆಯದು ಎಂದರು.
ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸುವವರಿದ್ದಾರೆ, ಆದರಿಂದ ಏನೂ ಆಗಲಾರದು, ಆದರೆ ಆ ಕ್ಷೇತ್ರದ ಪಾಲಿಗೆ ಅದು ಸರಿಯಲ್ಲ. ಭಕ್ತಿಯಿರುವವರಿಗೆ ಅಲ್ಲಿಗೇ ಹೋಗಿ ಪೂಜೆ ಮಾಡಬೇಕು ಎಂದೇನಿಲ್ಲ, ತನ್ನ ಮನೆಯಲ್ಲಿ ಕುಳಿತೂ ಅಯ್ಯಪನನ್ನೂ ಪೂಜಿಸಬಹುದಾಗಿದೆ ಎಂದು ಹೇಳಿದರು.