ಮೂಡುಬಿದಿರೆ: ಕಾಂತಾವರ ಗ್ರಾಮದ ಕೇಪ್ಲಾಜೆ ಕೂಡು ರಸ್ತೆ ಬಳಿ ಉರುಳಿಗೆ ಬಿದ್ದಿರುವ ಚಿರತೆಯೊಂದನ್ನು ಮೂಡುಬಿದಿರೆ ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಕೆಪ್ಲಾಜೆಯ ಕೂಡು ರಸ್ತೆ ಬಳಿ ಕಾಡು ಪ್ರಾಣಿ ಬೇಟೆಗೆ ಅಪರಿಚಿತರು ಇರಿಸಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಬಿದ್ದದನ್ನು ಸ್ಥಳೀಯರು ಕಂಡು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪಿಲಿಕುಳ ನಿಸರ್ಗಧಾಮದ ಅರಿವಳಿಕೆ ತಜ್ಞರಾದ ಜಯಪ್ರಕಾಶ್ ಭಂಡಾರಿ ಆಗಮಿಸಿ ಅರಿವಳಿಕೆ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಅರಣ್ಯ ಇಲಾಖೆಯ ಸಿಬಂದಿಗಳು ಚಿರತೆಯನ್ನು ಉರುಳಿನಿಂದ ಬಿಡಿಸಿದರು.
ಉರುಳಿಗೆ ಬಿದ್ದಿರುವ ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮೂಡುಬಿದಿರೆ ಅರಣ್ಯ ಇಲಾಖೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ ತಿಳಿಸಿದ್ದಾರೆ.
ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಅರಣ್ಯ ರಕ್ಷಕ ವಿನಾಯಕ ಹಾಗೂ ಅರಣ್ಯ ಸಿಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.