ಪುತ್ತೂರು: ಸ್ಕೂಟರ್ನಲ್ಲಿ ಹಿಂಬಾಲಿಸಿ ಯುವಕನೋರ್ವನಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಜೂ.1ರಂದು ಕೊಂಬೆಟ್ಟು ಬಂಟರ ಭವನದ ಎದುರು ನಡೆದಿದ್ದು, ಘಟನೆಗೆ ಸಂಬಂಧಿಸಿ ತೀವ್ರ ಗಾಯಗೊಂಡ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿ ಪತ್ರಿಕಾ ವಿತರಕನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಅನಂತಾಡಿ ಮಹಾಬಲ ರೈ ಅವರ ಪುತ್ರ ಬದಲಿ ಕಾರುಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಶರತ್ ರೈ(28ವ) ಗಾಯಾಳು. ಅವರು ಸ್ಕೂಟರ್ನಲ್ಲಿ ಕೊಂಬೆಟ್ಟು ರಸ್ತೆಯಲ್ಲಿ ಬರುತ್ತಿದ್ದು, ಬಂಟರಭವನ ತಲುಪುತ್ತಿದ್ದಂತೆ ಹಿಂದಿನಿಂದ ಆ್ಯಕ್ಟೀವಾ ಸ್ಕೂಟರ್ನಲ್ಲಿ ಬಂದ ಬಲ್ನಾಡಿನಲ್ಲಿ ವಾಸ್ತವ್ಯ ಹೊಂದಿರುವ ವಿನೋದ್(27ವ) ಎಂಬವರು ಅವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಿಂದಾಗಿ ಶರತ್ ಅವರ ಎಡಕೈ ತೋಲು ಮತ್ತು ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ತಕ್ಷಣ ಅವರನ್ನು ಇಲ್ಲಿನ ಆದರ್ಶ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿ ವಿನೋದ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಆರೋಪಿ ವಿರುದ್ಧ ಕೊಲೆ, ಹಲ್ಲೆಗೆ ಸಂಬಂಧಿಸಿ ಸೆಕ್ಷನ್ 341, 324, 307 ಪ್ರಕರಣ ದಾಖಲಿಸಲಾಗಿದೆ.