ಮೂಡುಬಿದಿರೆ: ಇಲ್ಲಿನ ನಗರ ಯೋಜನಾ ಪ್ರಾಧಿಕಾರ (ಮೂಡಾ) ನೂತನ ಅಧ್ಯಕ್ಷರ, ಮೂವರು ಸದಸ್ಯರ ಪದಗ್ರಹಣ ಸಮಾರಂಭವು ಮೂಡುಬಿದಿರೆ ಪುರಸಭೆ ಆವರಣದಲ್ಲಿ ಶುಕ್ರವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಸರ್ಕಾರದ ಆದೇಶ ಪತ್ರವನ್ನು ಮೂಡಾ ನೂತನ ಅಧ್ಯಕ್ಷ ಮೇಘನಾಥ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು, ಮೂಡುಬಿದಿರೆಯಲ್ಲಿ ನಗರ ಅಭಿವೃದ್ಧಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮೂಡಾದ ಹೊಸ ಅಧ್ಯಕ್ಷರು, ಸದಸ್ಯರು ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವುದರಿಂದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ಭರವಸೆ ಇದೆ. ಮಹಾಯೋಜನೆಯನ್ನು ಸಾರ್ವಜನಿಕರಿಗೆ ಪೂರಕವಾಗುವಂತೆ ಅನುಷ್ಠಾನಗೊಳಿಸುವಲ್ಲಿಯೂ ಪ್ರಯತ್ನಿಸುತ್ತೇವೆ. ಸರಕಾರದ ಮಟ್ಟದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುತ್ತೇವೆ. ಭೂಪರಿವರ್ತನೆ ಸಹಿತ ಮನೆ, ಕಟ್ಟಡ ನಿರ್ಮಾಣದ ಕುರಿತು ಕಾನೂನಾತ್ಮಕ ಅಡಚಣೆಗಳನ್ನು ಕೂಡ ಸರಳೀಕರಿಸುವ ಪ್ರಾಮಾಣಿಕ ಶ್ರಮವಹಿಸಲಾಗುವುದು ಎಂದರು.
ನೂತನ ಅಧ್ಯಕ್ಷ ಮೇಘನಾಥ ಶೆಟ್ಟಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತಿರುವ ಶಾಸಕರ ಬೆಂಬಲ ಹಾಗೂ ಮೂಡುಬಿದಿರೆ ಜನತೆ ಸಹಕಾರದಿಂದ ಮೂಡಾವನ್ನು ಮಾದರಿ ಪ್ರಾಧಿಕಾರವಾಗಿ ರೂಪಿಸುವಲ್ಲಿ ಶ್ರಮ ವಹಿಸುತ್ತೇವೆ. ಪಾರದರ್ಶಕ ಆಡಳಿತ, ಮಧ್ಯವರ್ತಿಗಳ ಉಪಟಳವಿಲ್ಲದೇ ನೇರವಾಗಿ ತ್ವರಿತಸೇವೆಯನ್ನು ನೀಡಲು ಬದ್ಧರಾಗಿದ್ದೇವೆ ಎಂದರು.
ಮೂಡಾ ಅಧ್ಯಕ್ಷರು ಹಾಗೂ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿಗಾರ್, ಮಂಜುನಾಥ ರೈ ಅವರನ್ನು ಅಭಿನಂದಿಸಲಾಯಿತು.
ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಾಯ್ಲಸ್ ತಾಕೋಡೆ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡುಬಿದಿರೆ ತಾಪಂ ಅಧ್ಯಕ್ಷೆ ರೇಖಾ ಸಾಲ್ಯಾನ್, ಮಂಗಳೂರು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಉಪಾಧ್ಯಕ್ಷ ಈಶ್ವರ ಕಟೀಲ್, ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು.
ಮುಡಾ ಕಾರ್ಯದರ್ಶಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.