ಬೆಳ್ತಂಗಡಿ: ಲಾಕ್ ಡೌನ್ ಸಡಿಲಿಕೆಯು ತಾಲೂಕಿನ ಜನಜೀವನವನ್ನು ಮತ್ತೆ ಮಾ. 22 ರ ಮೊದಲಿನ ಸ್ಥಿತಿಗೆ ತಂದಿಟ್ಟಿದೆ. ಸೋಮವಾರವು ಮದ್ಯವ್ಯಸನಿಗಳ ದಿನವಾಗಿ ಪರಿಣಮಿಸಿದೆ.
ತಾಲೂಕಿನ ಎಲ್ಲಾ 81 ಗ್ರಾಮಗಳು ಜನತಾ ಕರ್ಫ್ಯೂಗಿಂತ ಮೊದಲಿನ ದಿನಗಳಿಗೆ ಮರಳಿದೆ. ಬಸ್ಸುಗಳನ್ನು ಹೊರತು ಪಡಿಸಿ ಖಾಸಗಿ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಸಂಚಾರ ನಡೆಸಿವೆ. ರಿಕ್ಷಾಗಳು ರಸ್ತೆಗಿಳಿದಿದ್ದು ಜನರಿಗಾಗಿ ಸೇವೆ ನೀಡತೊಡಗಿವೆ. ಕಟ್ಟಡ,ಕೃಷಿ ಕಾರ್ಯಗಳು ಚೇತರಿಸಿಕೊಂಡಿವೆ. ಬಾವಿಗಳಿಗೆ ಸಿಮೆಂಟ್ ರಿಂಗ್ ಇಳಿಸುವ ಕಾರ್ಯ ಪ್ರಾರಂಭಗೊಂಡಿವೆ. ಇದುವರೆಗೆ ಮೆಡಿಕಲ್ ಮತ್ತು ಜಿನಸು ಅಂಗಡಿಗಳು ಮಾತ್ರ ವ್ಯಾಪಾರ ಮಾಡಿಕೊಂಡಿದ್ದರೆ ಇದೀಗ ಚಿನ್ನ, ಫ್ಯಾನ್ಸಿ, ಸ್ಟೇಶನರಿ, ಚಪ್ಪಲಿ, ಹಾರ್ಡ್ ವೇರ್, ಮದ್ಯ, ಇಲೆಕ್ಟ್ರಾನಿಕ್ಸ್ ಇನ್ನಿತರೆ ವ್ಯಾಪಾರಿ ಕೇಂದ್ರಗಳು ತಮ್ಮ ಷಟರ್ ಗಳನ್ನು ಮೇಲೆತ್ತಿವೆ. ಸೋಮವಾರದ ಸಂತೆ ಸ್ಥಳಾಂತರಗೊಂಡಿರುವ ಎ.ಪಿ.ಎಂ.ಸಿ. ಪ್ರಾಂಗಣದಲ್ಲೇ ಮುಂದುವರಿದಿದೆ.
ಕುಡುಕರ ಸಂಭ್ರಮ : ಎಲ್ಲಕ್ಕಿಂತ ಮುಖ್ಯವಾಗಿ ಮದ್ಯವ್ಯಸನಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಾಗಿ ಬೇಕು ಬೇಕಾದ ಮದ್ಯವನ್ನು ಕೊಳ್ಳುತ್ತಿರುವುದು ತಾಲೂಕಿನ ಎಲ್ಲಾ 17 ವೈನ್ ಶಾಪ್ ಗಳಲ್ಲಿ ಕಂಡುಬಂತು. ಕೆಲವೆಡೆ 500 ಮೀ. ಗಳಿಗಿಂತಲೂ ಹೆಚ್ಚು ಉದ್ದದ ಸಾಲು ಇತ್ತು. ಎಲ್ಲಿಯೂ ಯಾವುದೇ ಗೊಂದಲವಿಲ್ಲದೆ ಬಡ ಮತ್ತು ಮಧ್ಯಮ ವರ್ಗದ ವ್ಯಸನಿಗಳು ಖರೀದಿ ಮಾಡಿ ಮನೆಗೆ ಕೊಂಡೊಯ್ದರು. ಅವರಲ್ಲಿ ಶೇ. 95 ರಷ್ಟು ಮಂದಿ ವಿವಿಧ ಪಕ್ಷ, ಸಂಘಟನೆ, ಸಂಸ್ಥೆಗಳಿಂದ ಆಹಾರದ ಕಿಟ್ ಗಳನ್ನು ಪಡೆದುಕೊಂಡವರೇ ಇದ್ದರು. ಸರಕಾರದ ಯೋಜನೆಗಳಿಗಾಗಿ ಸರತಿ ಸಾಲು ನಿಲ್ಲಲು ನೂರಾರು ಸಬೂಬುಗಳನ್ನು, ತೊಂದರೆಗಳನ್ನು ಹೇಳುವವರೇ ಇಂದು ಮದಿರೆಗಾಗಿ ತುಟಿಪಿಟಿಕ್ ಎನ್ನದೆ ನಿಂತಿದ್ದರು. ಎಲ್ಲರ ಮೊಗದಲ್ಲೂ ಸಾರ್ಥಕ ಭಾವವಿತ್ತು