ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಸೋಮವಾರ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್ಡ್ ಡೌನ್ ಮಾಡುವುದರೊಂದಿಗೆ ಗ್ರಾಮಸ್ಥರೆಲ್ಲರನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ.
ಗ್ರಾಮದ ಸುಮಾರು 50 ವರ್ಷದ ವ್ಯಕ್ತಿಯೊಬ್ಬರು ಏ.22 ರಂದು ಮುಂಬಯಿಂದ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಏ.25 ರಂದು ಆತನ ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದ್ದರ ಪರಿಣಾಮ ಸೋಮವಾರ ಸೋಂಕು ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ, ಮಗ ಮತ್ತು ಬಾಮೈದರನ್ನು ಹೋಂ ಕ್ವಾರೈಂಟನ್ಗೆ ಒಳಪಡಿಸಿದ್ದಾರೆ.
ರಾತ್ರೋರಾತ್ರಿ ಗ್ರಾಮ ಸೀಲ್ಡ್ ಡೌನ್ : ಸೋಂಕಿತನ ವರದಿ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ ಅಂದರೆ ಭಾನುವಾರ ರಾತ್ರಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಸೋಂಕಿತ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸುವ ಜತೆಗೆ ಗ್ರಾಮಕ್ಕಿರುವ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿದ್ದು, ಇಡೀ ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿತ್ತು. ಇದರಿಂದ ಗ್ರಾಮಸ್ಥರು ಮತ್ತು ಸುತ್ತಲಿನ ಗ್ರಾಮದ ನಿವಾಸಿಗಳು ಆತಂಕಕ್ಕೊಳಗಾಗಿ ಪಕ್ಕದ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮಗಳ ರಸ್ತೆಯನ್ನು ಬಂದ್ ಮಾಡಿದ್ದಾರೆ.
ಕೊರೊನಾ ಸೋಂಕು ದೃಢವಾಗುತ್ತಿದ್ದಂತೆಯೇ ಗ್ರಾಮದಲ್ಲಿರುವ ಪ್ರತಿಯೊಬ್ಬರಿಗೂ ಆರೋಗ್ಯ ಇಲಾಖೆ ವತಿಯಿಂದ 4 ತಂಡಗಳನ್ನು ರಚಿಸಿಕೊಂಡು ಇಡೀ ಗ್ರಾಮದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇಷ್ಟಲ್ಲದೆ ಪಕ್ಕದ ಗ್ರಾಮದ ನಿವಾಸಿಗಳಿಗೂ ಆರೋಗ್ಯ ಇಲಾಖೆಯ ತಂಡ ಪರೀಕ್ಷೆಯನ್ನು ನಡೆಸುತ್ತಿದೆ.
ಸೋಂಕು ಧೃಡವಾಗುತ್ತಿದ್ದಂತೆ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್ ಕುಂಞಿ ಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ಪಿಎಸ್ಸೈ ಬಸವರಾಜು ಭೇಟಿ ನೀಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಜತೆಗೆ ಸ್ಥಳೀಯ ಕೊರೊನಾ ಸೈನಿಕರಿಗೆ ಧೈರ್ಯ ತುಂಬಿದರು.
ಇಷ್ಟಲ್ಲದೆ ತಾಲೂಕಿಗೆ ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಹೊರಗಿನಿಂದ ಬಂದಿರುವವರ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.