ಬೆಳ್ತಂಗಡಿ: ನಗರ ಭಾಗದಲ್ಲಿರುವ ಪೆಟ್ರೋಲ್ ಬಂಕ್ ನ ಸಮೀಪವಿರುವ ಎಟಿಎಂ ಕಳವಿಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಗರದ ಡಿಸಿಸಿ ಬ್ಯಾಂಕಿನ ಎದುರು ಭಾಗದ ಕಟ್ಟಡಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕಳವಿಗೆ ಯತ್ನಿಸಿದ್ದಾರೆ. ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಈ ಸಂದರ್ಭವನ್ನು ಉಪಯೋಗಿಸಿ, ಎಟಿಎಂ ಯಂತ್ರಕ್ಕೆ ನೈಲಾನ್ ಹಗ್ಗವನ್ನು ಬಿಗಿದು ಯಂತ್ರವನ್ನು ಕಳವಿಗೆ ಯತ್ನಿಸಿದ್ದಾರೆ. ಎಟಿಎಂ ಯಂತ್ರದ ಹಣ ಹೊರಬರುವಲ್ಲಿಗೆ ಕಬ್ಬಿಣದ ರಾಡ್ ತುರುಕಿಸಿ, ಹಗ್ಗ ಕಟ್ಟಿದ್ದಾರೆ. ಯಾವುದೋ ವಾಹನಕ್ಕೆ ಕಟ್ಟಿ ಎಳೆದಿರುವ ಸಾಧ್ಯತೆ ಕಂಡು ಬರುತ್ತಿದೆ.
ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದರಿಂದ ಆಗಾಗ ವಿದ್ಯುತ್ ವ್ಯತ್ಯಯ ಆಗಿತ್ತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದರೂ ಕಳ್ಳರು ಎಟಿಎಂ ಕಳವಿಗೆ ಯತ್ನಿಸಿದ್ದಾರೆ. ಇದರ ಪಕ್ಕದಲ್ಲೇ ವಿಜಯ ಬ್ಯಾಂಕಿನ ಎಟಿಎಂ ಕೂಡ ಇದೆ. ಈ ಎರಡು ಎಟಿಎಂಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಅದು ಕಾರ್ಯಾಚರಿಸುತ್ತಿದೆಯೇ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಕಳವಿಗೆ ಯತ್ನಿಸಿದ್ದ ಎಟಿಎಂನ ರೂಂನೊಳಗೆ ಒಂದು ಸಿಸಿ ಕ್ಯಾಮರಾಕ್ಕೆ ಯಾವುದೇ ಸ್ಪ್ರೇ ಮಾಡಿದ್ದಾರೆ. ಇಲ್ಲಿನ ಎರಡು ಎಟಿಎಂಗಳಿಗೆ ಸೆಕ್ಯೂರಿಟಿ ಗಾರ್ಡ್ ಗಳಿರದ ಕಾರಣ ಕಳವಿಗೆ ಯತ್ನಿಸಿದ್ದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಠಾಣೆಗೆ ಸಂಬಂಧವಟ್ಟವರು ದೂರು ನೀಡಿದ್ದಾರೆ.