ಕಾಸರಗೋಡು: ನಿಲುಗಡೆಗೊಳಿಸಿದ್ದ ಕಾರಿನ ಮೇಲೆ ಲಾರಿ ಬಿದ್ದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟು, ಐವರು ಗಾಯಗೊಂಡ ದಾರುಣ ಘಟನೆ ಇಂದು ಬೆಳಿಗ್ಗೆ ಕಣ್ಣೂರು ಇರಿಟ್ಟಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ವಡಗರ ತಿಕ್ಕೊಡಿಯ ಆಶಿಕ್ (19), ಮಿನಾಸ್ (19) , ಯಾಸಿನ್ (18) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ವಡಗರ ಎಂ.ಎಚ್.ಇ.ಎಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಇರಿಟ್ಟಿ ಮಾಕೂಡ್ ಚೆಕ್ ಪೋಸ್ಟ್ ಸಮೀಪ ನಿಲುಗಡೆಗೊಳಿಸಿದ್ದ ಟವೇರಾ ಕಾರಿನ ಮೇಲೆ ಮಂಗಳೂರು ಕಡೆಯಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಮಗುಚಿ ಬಿದ್ದು ಈ ದುರ್ಘಟನೆ ನಡೆದಿದೆ.
ಕಾರಲ್ಲಿದ್ದವರು ಪ್ರವಾಸಕ್ಕೆ ತೆರಳಿ ಮರಳುತ್ತಿದ್ದರು. ಅಪಘಾತದಿಂದ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ಅಗ್ನಿಶಾಮಕ ದಳ, ಪೊಲೀಸ್ ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಇರಿಟ್ಟಿ ಪೊಲೀಸರು ದಾಖಲಿಸಿಕೊಂಡಿದ್ದಾರೆ