ಕಾರ್ಕಳ: ಮನೆಒಕ್ಕಲು ಸಮಾರಂಭ ಮುಗಿಸಿ ಭೋಜನ ಮಾಡಿ ಊರಿಗೆ ಹಿಂತಿರುಗುತ್ತಿದ್ದಾಗ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಓರ್ವ ಸ್ಥಳದಲ್ಲಿಯೇ ದಾರುಣ ರೀತಿಯಲ್ಲಿ ಮೃತ ಪಟ್ಟಿದ್ದು ನಾಲ್ವರು ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಅಂಬಲಪ್ಪಾಡಿ ನಿವಾಸಿ ಸದಾನಂದ ಸುವರ್ಣ(70) ಘಟನೆಯಲ್ಲಿ ಸ್ಥಳದಲ್ಲಿಯೇ ಜೀವತೆತ್ತವರು. ಪತ್ನಿ ಗಿರಿಜಾ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಮಗಳು ಸುಪ್ರೀತಾ, ಅಳಿಯ ಮಹೇಶ, ಮೊಮ್ಮಗ ಮಾನಸ ಎಂಬವರು ಇತರ ಗಾಯಾಳುಗಳು. ನಕ್ರೆ ಪರಿಸರದಲ್ಲಿ ಗೃಹ ಪ್ರವೇಶ ಮುಗಿಸಿ ಮಧ್ಯಾಹ್ನ ಸುಮಾರು 2.30ರ ವೇಳೆಗೆ ರಂಗನ ಪಲ್ಕೆ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಟಯರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಅದು ಪಲ್ಟಿ ಹೊಡೆದಿದೆ.
ಸ್ಥಳೀಯ ನಾಗರಿಕರು ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ನೆರವು ನೀಡಿದರು. ಮೃತದೇಹವು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆತ್ಯಗಾರದಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಡಾ. ಸುಮನಾ.ಡಿ, ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್, ಎಸೈ ರವಿ ಮೊದಲಾದವರು ತೆರಳಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.