ಸುಳ್ಯ: ಬೆಳ್ಳಂ ಬೆಳಗ್ಗೆ ಸುಳ್ಯ ಶಾಂತಿನಗರದಲ್ಲಿ ಪ್ರತಿಧ್ವನಿಸಿದ ಗುಂಡಿನ ಮೊರೆತ ಸುಳ್ಯದ ಜನರನ್ನು ಬೆಚ್ಚಿ ಬೀಳಿಸಿದೆ.
ಗುಂಡಿನ ಶಬ್ದ ಕೇಳಿ ಶಾಂತಿನಗರ ಪ್ರದೇಶ ಎಚ್ಚರಗೊಂಡರೆ ಗುಂಡು ಹಾರಿಸಿ, ತಲವಾರು, ಚೂರಿಯಿಂದ ದಾಳಿ ನಡೆಸಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ದೊಡ್ಡಡ್ಕ ನಿವಾಸಿ ಸಂಪತ್ಕುಮಾರ್ (36) ಎಂಬವರು ಕೊಲೆಯಾಗಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಸುದ್ದಿ ಕೇಳಿ ಸುಳ್ಯ ನಗರ ಎಚ್ಚರಗೊಂಡಿತು.
ಜನನಿಬಿಡ ಪ್ರದೇಶವಾದ ಶಾಂತಿನಗರದಲ್ಲಿ ನಡೆದ ಘಟನೆ ನೀಡಿದ ಭಯ ಜನರನ್ನು ಇನ್ನೂ ಬಿಟ್ಟಿಲ್ಲ. ಮುಸುಕುಧಾರಿಗಳ ತಂಡ ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದಾಗ ಸಂಪತ್ ಕಾರಿನಿಂದ ಇಳಿದು ಓಡಿ ಪಕ್ಕದ ಮನೆಯೊಂದಕ್ಕೆ ಹೊಕ್ಕು ಬಾಗಿಲು ಹಾಕಿದ್ದ. ಅಲ್ಲಿಗೆ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮನೆಯೊಳಗೆ ಪ್ರವೇಶಿಸಿ ಸಂಪತ್ನ ಮೇಲೆ ಗುಂಡು ಹಾರಿಸಿ, ತಲವಾರು, ಚೂರಿಯಿಂದ ದಾಳಿ ನಡೆಸಿದ್ದಾರೆ.
ಆ ಮನೆಯಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಚಿಕ್ಕ ಮಗುವಿನ ಎದುರಿನಲ್ಲೇ ಕೊಲೆ ನಡೆಸಿದ್ದಾರೆ ಎಂಬುದು ಘಟನೆಯ ಭೀಕರತೆಯನ್ನು ಸಾರಿ ಹೇಳುತ್ತದೆ. ರಕ್ತದ ಮುಡುವಿನಲ್ಲಿ ಬಿದ್ದಿದ್ದ ಮೃತದೇಹ ಮತ್ತು ಮನೆಯ ದೃಶ್ಯ ಭೀಭತ್ಸವಾಗಿತ್ತು. ಪೂರ್ವ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ. ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಬಾಲಚಂದ್ರ ಕಳಗಿ ಅವರನ್ನು ಅಪಘಾತ ನಡೆಸಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಸಂಪತ್ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದು ಕಲ್ಲು ಮತ್ತು ಮರಳು ಮತ್ತಿತರ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಮಾತ್ರ ಆತ ಸುಳ್ಯದ ಶಾಂತಿನಗರದಲ್ಲಿ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ.
ಬುಧವಾರ ರಾತ್ರಿ ಇಲ್ಲಿ ಈತ ತಂಗಿದ್ದು ಇದನ್ನು ತಿಳಿದು ಹೊಂಚು ಹಾಕಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಕೊಲೆ ಮಾಡಿದೆ.
ಸಂಪತ್ಕುಮಾರ್ ಕೊಲೆ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ಸುಳ್ಯ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು ಪೊಲೀಸರು ತನಿಖೆ ಚುರುಕು ಗೊಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.