ಪುತ್ತೂರು: ಸರಕಾರಿ ಇಲಾಖೆಗಳ ಕೇಂದ್ರ ಭಾಗದ ಪುತ್ತೂರಿನ ಪ್ರಮುಖ ರಸ್ತೆಯೊಂದರ ಪಕ್ಕದ ಫುಟ್ಪಾತ್ನಲ್ಲೇ ನಿಷ್ಪ್ರಯೋಜಕ ಬೋರ್ವೇಲ್ ಬಾಯಿ ತೆರೆದು ಆಪಾಯವನ್ನು ಆಹ್ವಾನಿಸುತ್ತಿದೆ. ಈ ಕುರಿತು ಜು.29ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಯಿತು. ಆದರೆ ಕೊಳವೆ ಬಾವಿಯ ಯಾರಿಗೆ ಸೇರಿದ್ದು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪುತ್ತೂರು ಮಿನಿ ವಿಧಾನಸೌಧದ ಹಿಂಭಾಗದಲ್ಲಿ, ರಾಜ್ಯ ಸರಕಾರಿ ನೌಕರರ ಸಂಘದ ಕಚೇರಿ, ವಾಣಿಜ್ಯ ಸಂಕೀರ್ಣ ಮತ್ತು ತಾ.ಪಂ ಕಚೇರಿಗೆ ಹೊಂದಿಕೊಂಡು ಇರುವ ಫುಟ್ಪಾತ್ನಲ್ಲೇ ಈ ಕೊಳವೆ ಬಾವಿ ಇದೆ. ದಿನ ನಿತ್ಯಾ ಇಲ್ಲಿ ನೂರಾರು ಮಂದಿ ಸಾರ್ವಜನಿಕರು ಒಡಾಡುತ್ತಿರುತ್ತಾರೆ. ಇಂಥ ಸ್ಥಳದಲ್ಲೇ ನಿಷ್ಪ್ರಯೋಜಕ ಕೊಳವೆ ಬಾವಿ ಬಾಯಿ ತೆರೆದುಕೊಂಡು ನಿಂತಿದೆ. ಈ ಕೊಳವೆಬಾವಿಯ ಬಳಕೆ ನಿಲ್ಲಿಸಲಾಗಿದ್ದು, ಪಂಪ್ ಸಂಪರ್ಕ ತೆರವು ಮಾಡಲಾಗಿದೆ. ಆದರೆ ಕೇಸಿಂಗ್ ಕೊಳವೆ ಮೇಲ್ಮಟ್ಟದಲ್ಲೇ ಎದ್ದು ಕಾಣುತ್ತಿದ್ದು, ಕೊಳವೆ ಬಾವಿಗೆ ಮೇಲಿನಿಂದ ಮುಚ್ಚಲ ಹಾಕದೆ ಇರುವುದರಿಂದ ಇದು ಆಪಾಯವನ್ನು ಆಹ್ವಾನಿಸುತ್ತಿದೆ.
ಕೊಳವೆ ಬಾವಿ ಯಾರಿಗೆ ಸೇರಿದ್ದು ಯಕ್ಷ ಪ್ರಶ್ನೆ
ಇಲ್ಲಿರುವ ಕೊಳವೆ ಬಾವಿ ಕುರಿತು ನಗರಸಭೆಯನ್ನು ಪ್ರಶ್ನಿಸಿದರೆ ಅದು ನಮ್ಮದಲ್ಲ ಎಂದಿದ್ದಾರೆ. ತಾ.ಪಂ ಪ್ರಶ್ನಿಸಿದರೆ ಅವರೂ ಕೂಡಾ ಇದು ನಮ್ಮದಲ್ಲ ಎಂದಿದ್ದಾರೆ. ಕೊನೆಗೆ ರಾಜ್ಯ ಸರಕಾರಿ ನೌಕರರ ಸಂಘದ ವಾಣಿಜ್ಯ ಸಂಕೀರ್ಣದ ಪಕ್ಕದಲ್ಲಿ ಕೊಳವೆ ಬಾವಿ ಇರುವುದರಿಂದ ಸಂಘದ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಅವರೂ ಕೂಡಾ ಇದು ನಮ್ಮದಲ್ಲ ಎಂದಿದ್ದಾರೆ. ಹಾಗಿದ್ದರೆ ಈ ಕೊಳವೆ ಬಾವಿ ಯಾರಿಗೆ ಸೇರಿದ್ದು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಮೂರ್ನಾಲ್ಕು ತಿಂಗಳಿನಿಂದ ಇದೇ ಸ್ಥಿತಿ ಇದೆ. ಇದರ ಬಗ್ಗೆ ಆಡಳಿತ ವರ್ಗ ಗಮನ ಹರಿಸದೇ ಇರುವುದು ವಿಪರ್ಯಾಸ ಎಂದು ಇಲ್ಲಿನ ವರ್ತಕರು ಹೇಳುತ್ತಾರೆ. ‘ನಾನು ಹೊಸದಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಈ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿವಯರು ಹೇಳಿದ್ದಾರೆ.
ರಸ್ತೆ ಬದಿಯಲ್ಲಿ ಬಾಯಿ ಬಿಟ್ಟ ಸ್ಥಿತಿಯಲ್ಲಿರುವ ಕೊಳವೆ ಬಾವಿ ತಾಪಂಗೆ ಸೇರಿದ್ದಲ್ಲ ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಿಳಿಸಿದ್ದಾರೆ. ನಮ್ಮ ಆಡಳಿತ ಕಚೇರಿ ಸಂಕೀರ್ಣ ಬಿಟ್ಟರೆ ನಗರ ಪ್ರದೇಶದಲ್ಲಿ ಬೇರೆಲ್ಲೂ ನಮ್ಮ ಕೊಳವೆಬಾವಿ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.