ಉಳ್ಳಾಲ: ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ಕೋಟೆಕಾರು ಸಮೀಪದ ಬೀರಿ ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಉಪ್ಪಳ ನಿವಾಸಿ ಅಝೀಂ(23) ಪಾರಾದ ಕಾರು ಚಾಲಕ. ಮಂಗಳೂರಿನಿಂದ ಉಪ್ಪಳ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಚೆಕ್ ಪೋಸ್ಟ್ ಎದುರುಗಡೆ ರಾ.ಹೆ.ಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ತಪ್ಪಿಸಿ ಎದುರಿಗೆ ತೆರಳುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಅಝೀಂ ಪವಾಡಸದೃಶವಾಗಿ ಪಾರಾದರೆ, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕನೋರ್ವ ಸ್ಥಳಕ್ಕೆ ಬಂದಿದ್ದ ಪೊಲೀಸರ ಜತೆಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದನು. ಮೊದಲಿಗೆ ಪೊಲೀಸರು ಎಚ್ಚರಿಕೆಯನ್ನು ನೀಡಿದರೂ, ಆತ ಇನ್ನಷ್ಟ್ಟು ದುವರ್ತನೆಯನ್ನು ಮುಂದುವರಿಸಲು ತೊಡಗಿದಾಗ ರೊಚ್ಚಿಗೆದ್ದ ಪೊಲೀಸರು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.