News Karnataka Kannada
Thursday, May 09 2024
ಕರಾವಳಿ

ಸರ್ಕಾರಿ ಶಾಲಾ ಮಕ್ಕಳ ಹಸಿವು ನೀಗಿಸುವ ತರಕಾರಿ ವ್ಯಾಪಾರಿ

Photo Credit :

ಸರ್ಕಾರಿ ಶಾಲಾ ಮಕ್ಕಳ ಹಸಿವು ನೀಗಿಸುವ ತರಕಾರಿ ವ್ಯಾಪಾರಿ

ಬಂಟ್ವಾಳ: ದಾನ ಮಾಡುವುದು ದುಡ್ಡು ಇರುವವರು ಮಾತ್ರ ಎನ್ನುವ ಮಾತಿಗೆ ಅಪವಾದ ಎನ್ನುವಂತೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ನ ತರಕಾರಿ ವ್ಯಾಪಾರಿಯೊಬ್ಬರು ಸಮಾಜಕ್ಕೆ ಮಾದರಿಯಾಗಿರುವರು.

ಮೆಲ್ಕಾರ್ ನಲ್ಲಿ ಸಣ್ಣ ತರಕಾರಿ ಅಂಗಡಿ ಇಟ್ಟುಕೊಂಡಿರುವಂತಹ 21ರ ಹರೆಯದ ಮೊಹಮ್ಮದ್ ಶರೀಫ್ ಎಂಬವರು ಕಳೆದ ಎರಡು ವರ್ಷಗಳಿಂದ ಸಮೀಪದ ಮಜಿ ವೀರಕಂಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡಿ ಇತರ ಯುವಕರಿಗೂ ಪ್ರೇರಣೆಯಾಗಿರುವರು.

ಶರೀಫ್ ಅವರ ಅಂಗಡಿಗೆ ತರಕಾರಿ ಖರೀದಿ ಮಾಡಲು ಶಿಕ್ಷಕಿಯೊಬ್ಬರು ಬರುತ್ತಿದ್ದರು. ಮಾತುಮಾತಿನಲ್ಲಿ ಅವರು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ ಅಭಾವದ ಬಗ್ಗೆ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಈ ವೇಳೆ ಶರೀಫ್ ಮನಸ್ಸು ಕರಗಿ ಅದಾಗಲೇ ಉಚಿತ ತರಕಾರಿ ನೀಡಲು ನಿರ್ಧರಿಸಿದ್ದರು.

ಈ ಬಗ್ಗೆ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಶರೀಫ್ ಅವರು, ತಾನು ಕಷ್ಟದ ಜೀವನ ಸಾಗಿಸಿದ್ದ ಪರಿಣಾಮವಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ತರಕಾರಿ ನೀಡುವಂತಾಯಿತು. ಮಜಿ ಶಾಲೆಯಲ್ಲಿ ಸುಮಾರು 135
ವಿದ್ಯಾರ್ಥಿಗಳು ಇದ್ದಾರೆ ಮತ್ತು ಇವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದಲೇ ಬರುತ್ತಿರುವರು. ನನ್ನ ಶಾಲಾ ದಿನಗಳ ಬಗ್ಗೆ ಈಗಲೂ ನೆನಪಿದೆ. ಹಸಿವು ಮತ್ತು ಬಡತನ ನಮ್ಮ ಬಾಲ್ಯದ ವಾಸ್ತವವಾಗಿತ್ತು.
ಇಂತಹ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂದ ಶರೀಫ್ ಕಣ್ಣುಗಳು ತೇವಗೊಂಡಿದ್ದವು.

ಕಾನೂನು ವಿದ್ಯಾರ್ಥಿಯಾಗಬೇಕು ಎಂದು ಬಯಸಿದ್ದ ಶರೀಫ್ ಅವರು ಆರ್ಥಿಕ ಸಂಕಷ್ಟದಿಂದಾಗಿ ಅರ್ಧದಲ್ಲೇ ಇದನ್ನು ಬಿಡಬೇಕಾಗಿ ಬಂತು.

ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಡುವುದು ವಿವರಿಸಲು ಸಾಧ್ಯವಾಗದ ಅನುಭವ. ಈ ಎಲ್ಲಾ ಘಟನೆಗಳು ನನ್ನನ್ನು ಈಗಲೂ ತುಂಬಾ ಸೂಕ್ಷ್ಮ ವ್ಯಕ್ತಿಯನ್ನಾಗಿಸಿದೆ. ನನ್ನ ಜೀವನದಲ್ಲಿ ನಡೆದಿರುವಂತಹ ಕೆಲವೊಂದು
ಘಟನೆಗಳು ಈ ಸಮಾಜಸೇವೆಗೆ ಕಾರಣವಾಗಿದೆ ಎನ್ನುತ್ತಾರೆ ಅವರು.

ತನ್ನ ಈ ಒಳ್ಳೆಯ ಕಾರ್ಯಕ್ಕೆ ತಂದೆ ಅಬ್ದುಲ್ ಹಮೀದ್, ಹಿರಿಯ ಸೋದರ ನಜೀರ್ ಮತ್ತು ಮಾಜಿ ಶಾಲೆಯ ಶಿಕ್ಷಕಿ ಸಂಗೀತ ಶರ್ಮಾ, ಶಾಲೆಗೆ ತರಕಾರಿ ಕೊಂಡೊಯ್ಯುತ್ತಿರುವ ಮಾಜಿ ಹಳೆ ವಿದ್ಯಾರ್ಥಿ ಸಂಘದ
ಸದಸ್ಯರಾದ ಚಿನ್ನಾ ಅವರನ್ನು ಇದೇ ವೇಳೆ ಅಭಿನಂದಿಸಿದರು.

ಪ್ರತೀ ವಾರ ಶರೀಫ್ ಅವರು ಪಲ್ಯಕ್ಕಾಗಿ ಐದು ಕೆಜಿ ತರಕಾರಿ, ಸಾಂಬಾರಿಗೆ ಎಂಟು ಕೆಜಿ, ನಾಲ್ಕು ಕೆಜಿ ಟೊಮೆಟೋ, ಒಂದು ಕೆಜಿ ಮೆಣಸು, ಈರುಳ್ಳಿ, ಕೊತ್ತಂಬರಿ ಮತ್ತು ಶುಂಠಿ ಕಳುಹಿಸಿಕೊಡುವರು.

ತನ್ನ ಸಮಾಜಸೇವೆ ಬಗ್ಗೆ ಪ್ರಚಾರ ಪಡೆಯಲು ಖಂಡಿತವಾಗಿಯೂ ಇಷ್ಟವಿರಲಿಲ್ಲ. ಆದರೆ ತನ್ನಿಂದ ಬೇರೆ ತರಕಾರಿ ವ್ಯಾಪಾರಿಗಳಿಗೆ ಪ್ರೇರಣೆಯಾಗಲಿ ಎಂದು ಮಾಧ್ಯಮಕ್ಕೆ ತಿಳಿಸಲು ಅವರನ್ನು ತಂದೆ ಮನವೊಲಿಸಿರುವರು.
ತನ್ನ ತರಕಾರಿ ಅಂಗಡಿಯಲ್ಲಿ ಬೆಳಗ್ಗೆ 6ರಿಂದ 11 ಗಂಟೆ ತನಕ ಇದ್ದರೂ ಸಮಾಜಸೇವೆಗೆ ಸಿಗುವ ಯಾವುದೇ ಅವಕಾಶವನ್ನು ಅವರು ಕೈಬಿಡುವುದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು