ಮೂಡುಬಿದಿರೆ: ಇಲ್ಲಿರುವುದು ರಾಷ್ಟ್ರ ಧರ್ಮ ರಕ್ಷಣೆಯ ಕನಸುಗಳನ್ನು ಕಟ್ಟಿಕೊಂಡ ಮೂಡುಬಿದಿರೆ ಮೂಲದ ಯುವ ಸಮೂಹ. ಕಳೆದ 18 ವರ್ಷಗಳಿಂದ ರಾಜ್ಯ, ದೇಶದ ಪುಣ್ಯಕ್ಷೇತ್ರಗಳಿಂದ ಪಾದಯಾತ್ರೆ ಹೊರಟು ಶಬರಿಮಲೆ ಯಾತ್ರೆ ಪೂರೈಸಿ ಅವರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡ ಸಾರ್ಥಕತೆಯ ಯಶೋಗಾಥೆಯಿದು.
ಸಹಸ್ರಾರು ಕಿ.ಮೀ ಪಾದಯಾತ್ರೆಗಳ ಮೂಲಕ ಉದಾತ್ತ ಕನಸುಗಳನ್ನು ನನಸಾಗಿಸಿದ್ದು ಮಾತ್ರವಲ್ಲ ಖಾಸಗಿ ಬದುಕಿನಲ್ಲೂ ಸಂಸ್ಕಾರವಂತರಾಗಿ ಯಶಸ್ಸು ಕಂಡವರು. ಈ ಬಾರಿ ಅಯೋಧ್ಯೆ ಮತ್ತು ತಿರುಪತಿಯಿಂದ ಎರಡು ತಂಡಗಳಾಗಿ ಪಾದಯಾತ್ರೆ ನಡೆಸಿ ಮೂಡುಬಿದಿರೆಯ ತಮ್ಮ ಕ್ಷೇತ್ರ ಸನ್ನಿಧಿಗೆ ತಲುಪಿರುವ ತಂಡ ಇದೀಗ ಆಸುಪಾಸಿನ ವೃತಧಾರಿಗಳೂ ಸೇರಿ ಸುಮಾರು ಎಪ್ಪತ್ತು ಮಂದಿ ಪಾದಯಾತ್ರಿಗಳಾಗಿ ಇದೀಗ ಸೋಮವಾರ ಶಬರಿಮಲೆಗೆ ಹೊರಟು ನಿಂತಿದ್ದಾರೆ.
ಮೂಡುಬಿದಿರೆ ಮಿಜಾರಿನ ಶಾಂತಿಗಿರಿಯ ಅಶೋಕ್ ಶೆಟ್ಟಿಯವರು ಗುರುಸ್ವಾಮಿಯಾಗಿ ಕಟ್ಟಿ ಬೆಳೆಸಿರುವ ಅಯ್ಯಪ್ಪ ಮಂದಿರ ಈ ತಂಡದ ಕೇಂದ್ರಸ್ಥಾನ. ಕಾರ್ಕಳದ ಬಾಲಾಜಿ ಗುರುಸ್ವಾಮಿಯೇ ಇವರಿಗೆ ಪ್ರೇರಣೆ, ಮಿಜಾರಿನ ರಾಜಗುರು, ಸದಾಶಿವ ಗುರು ಸ್ವಾಮಿಯವರ ಮೂಲಕ ಬೆಳೆದ ವೃತಧಾರಿಗಳ ಶಿಬಿರದಲ್ಲಿ ಈಗಾಗಲೇ ಕಾಶಿ, ತಿರುಪತಿ, ಮಂತ್ರಾಲಯ, ಕೋಲಾಪುರ ಮಹಾಲಕ್ಷ್ಮೀ, ಕೊಲ್ಲೂರು, ಪೊಳಲಿ ಹೀಗೆ ಹಲವು ಪುಣ್ಯ ಕ್ಷೇತ್ರಗಳಿಂದ ಉದಾತ್ತ ಚಿಂತನೆಯ ಸಂಕಲ್ಪಗಳೊಂದಿಗೆ ಈ ತಂಡ ಪಾದಯಾತ್ರೆ ನಡೆಸಿಕೊಂಡು ಬಂದಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು. ಶಬರಿಮಲೆಯ ಪಾವಿತ್ರ್ಯತೆ ಉಳಿಯುವಂತಾಗಬೇಕು ಎನ್ನುವ ಸಂಕಲ್ಪದೊಂದಿಗೆ ಈ ಬಾರಿ ಅಯೋಧ್ಯೆ ಮತ್ತು ತಿರುಪತಿಯಿಂದ ಎರಡು ತಂಡಗಳು ಪಾದಯಾತ್ರೆ ನಡೆಸಿ ಈಗಾಗಲೇ ಮಿಜಾರಿನ ಕ್ಷೇತ್ರ ಸನ್ನಿಧಿಗೆ ತಲುಪಿದ್ದಾಗಿದೆ. ಕಳೆದ ಬಾರಿ ಗಡಿಯಲ್ಲಿ ಯೋಧರಿಗೆ ಶಾಂತಿಯುತ ವಾತಾವರಣವಿರಬೇಕು ಮತ್ತು ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕು ಎನ್ನುವ ಸಂಕಲ್ಪದೊಂದಿಗೆ ಗುಜರಾತಿನಲ್ಲಿ ಮೋದಿಯವರ ತಾಯಿಯ ಆಶೀರ್ವಾದ ಪಡೆದು ಈ ತಂಡ ಪಾದಯಾತ್ರೆ ಆರಂಭಿಸಿತ್ತು.
ಮೂಡುಬಿದಿರೆ, ಕುಲಶೇಖರ, ಸುರತ್ಕಲ್, ಬಂಟ್ವಾಳ ಹೀಗೆ ಆಸುಪಾಸಿನವರು ಸೇರಿ ತಂಡ ಕಟ್ಟಿಕೊಂಡು ಬೆಳೆಸಿದ ಈ ಪಾದಯಾತ್ರೆಯಲ್ಲಿ ಆರಂಭದಲ್ಲಿ ಹತ್ತು ಮಂದಿ ಇದ್ದವರು ಈಗ ಸಂಖ್ಯೆ ಎಪ್ಪತ್ತರ ಗಡಿ ದಾಟಿದೆ. ಬರೇ ಯುವಕರು ಮಾತ್ರವಲ್ಲ ಇರುವೈಲು ರಾಜಪ್ಪ ನವರಂತಹ 67ರ ಹರೆಯದ ಉತ್ಸಾಹಿಗಳೂ ಅಯೋಧ್ಯೆಯಂತಹ ದೂರದ ಕ್ಷೇತ್ರಗಳಿಂದ ಪಾದ ಯಾತ್ರೆ ಮಾಡಿದವರಿದ್ದಾರೆ. 14 ರಿಂದ 18 ಬಾರಿಯೂ ಪಾದಯಾತ್ರೆ ಮಾಡಿದವರಿದ್ದಾರೆ. ಕ್ಷೇತ್ರ ಶಾಂತಿಗಿರಿಯಿರಬಹದು ಯಾ ಪಾದಯಾತ್ರೆಯಿರಬಹುದು ನಮ್ಮ ಕೋರಿಕೆಗಳೆಲ್ಲವೂ ಸ್ವಾಮಿಯ ದಯೆಯಿಂದ ಈಡೇರಿವೆ ಎಂದು ವೃತಧಾರಿಗಳು ದನಿಗೂಡಿಸುತ್ತಾರೆ. ನಾವು ಶಿಸ್ತಿಗೆ ಆದ್ಯತೆ ನೀಡಿದ್ದೇವೆ. ಪಾದಯಾತ್ರೆಯುದ್ದಕ್ಕೂ ಸಹೃದಯಿಗಳ ಸಹಕಾರ ಸಿಕ್ಕಿದೆ ಎನ್ನುತ್ತಾರೆ ಗುರುಸ್ವಾಮಿ ರಾಜೇಶ್ ನಾರ್ಲ.
ಕಳೆದ ಸೆ 18ರಂದು ಅಯೋಧ್ಯೆಯಿಂದ ಮತ್ತು ಅ 30.ರಂದು ತಿರುಪತಿಯಿಂದ ಹೊರಟ ಪಾದಯಾತ್ರಿಗಳು ಇದೀಗ ಮಿಜಾರಿನ ಶಾಂತಿಗಿರಿಯಿಂದ ಸೋಮವಾರ ಜಂಟಿಯಾಗಿ ಶಬರಿಮಲೆಯತ್ತ ಪಾದಯಾತ್ರೆ ನಡೆಸಲಿದ್ದಾರೆ. ಡಿ17ರಂದು ಶಬರಿಮಲೆಯಲ್ಲಿ ಸ್ವಾಮಿಯ ದರ್ಶನ ಪಡೆಯುವ ಗುರಿ ತಂಡದ್ದಾಗಿದೆ. ಯುವ ಮನಸ್ಸುಗಳನ್ನು ರಾಷ್ಟ್ರ ಹಿತದ ಕನಸುಗಳೊಂದಿಗೆ ಸಂಸ್ಕಾರಯುತ ಬದುಕಿನ ಹಾದಿಯಲ್ಲಿ ಮುನ್ನಡೆಸುತ್ತಿರುವ ಶಾಂತಿಗಿರಿಯ ವೃತಧಾರಿಗಳ ತಂಡದ ಪಾದಯಾತ್ರೆ ಸಮಾಜಕ್ಕೊಂದು ಅನುಕರಣೀಯ ಸಂದೇಶ ನೀಡಿದೆ ಎನ್ನುವುದಂತೂ ನಿಜ.
ಶ್ವಾನದ ಪಾದಯಾತ್ರೆ!
ಈ ಬಾರಿ ತಿರುಪತಿಯಿಂದ ಹೊರಟ ತಂಡವನ್ನು ಅಲ್ಲಿ ಶ್ರೀವಾರಿ ಮೆಟ್ಟಿಲ ಬಳಿಯಿಂದ ಶ್ವಾನವೊಂದು ಹಿಂಬಾಲಿಸಿ 580ಕ್ಕೂ ಅಧಿಕ ಕಿಮಿ ಪಾದಯಾತ್ರೆ ನಡೆಸಿ ಗಮನ ಸೆಳೆದಿರುವುದು ವಿಶೇಷ. ಸಾತ್ವಿಕ ಆಹಾರ, ಸ್ವಭಾವದಿಂದ ತಂಡದ ಅವಿಭಾಜ್ಯ ಅಂಗವಾಗಿರುವ ಶ್ವಾನದ ಉತ್ಸಾಹಕ್ಕೆ ವೃತಧಾರಿಗಳೇ ಅಚ್ಚರಿಪಟ್ಟಿದ್ದಾರೆ. 14 ವರ್ಷಗಳ ಹಿಂದೆ ನೀಲೇಶ್ವರದಲ್ಲಿ ಪಾದಯಾತ್ರೆ ವೇಳೆಗೆ ಇದೇ ರೀತಿ ನಾಯಿಯೊಂದು ಇವರ ತಂಡದ ಜತೆ ಮಲೆಗೆ ತೆರಳಿ ವಾಪಾಸಾದ ನಿದರ್ಶನವಿದೆ. ಆ ನಾಯಿ ಇನ್ನೂ ಸ್ವಾಮಿ ಎಂದು ನಾಮಕರಣಗೊಂಡು ಅಶೋಕ ಸ್ವಾಮಿಯವರ ಶಾಂತಿಗಿರಿಯ ನಿವಾಸದಲ್ಲಿದೆ. ಇದೀಗ ಪ್ರಸ್ತುತ ತಂಡದಲ್ಲಿರುವ ನಾಯಿಗೂ ಸ್ವಾಮಿ ಎಂದು ಕರೆಯಲಾಗುತ್ತಿದ್ದು ಯಾತ್ರೆ ಮುಗಿಸಿ ಮರಳಿ ಬರುತ್ತದೋ ಎಂಬ ಕುತೂಹಲವಿದೆ.