ಮೂಡುಬಿದರೆ: ಕಲಿಸಲು ಗುರು ಇಲ್ಲ, ತರಬೇತು ಪಡೆಯಲು ಬೇಕಾದ ಹಣವಿಲ್ಲ. ಆದರೆ ಇಚ್ಛಾ ಶಕ್ತಿ, ಅದಕ್ಕೆ ಪೂರಕವಾದ ಕಠಿಣ ಪರಿಶ್ರಮ. ಮನಸ್ಸಿನಲ್ಲಿ ಗರಿಗೆದರಿದ ಗುರಿಯನ್ನು ತಲುಪುವ ಉತ್ಕಟ ಬಯಕೆಯಿಂದ ಮಂಗಳೂರಿನ ಏಕಲವ್ಯ ಕೇವಲ 2 ವರ್ಷಗಳಲ್ಲಿ ನಾಲ್ಕು ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಂಗಳೂರು ತಾಲೂಕಿನ ಗುರುಪುರ ನಿವಾಸಿ, ಮೂಡುಬಿದರೆ ಆಳ್ವಾಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಕ್ಷಿತ್ ಶೆಟ್ಟಿ,ಏಕಲವ್ಯನ ರೀತಿ ಸಾಧನೆ ಮಾಡಿದ ಓಟಗಾರ. ಸಾಧನೆಯನ್ನು ಮಾಡಲೇ ಬೇಕು ಎನ್ನುವ ಛಲದೊಂದಿಗೆ ನಿಶ್ಚಲವಾದ ಗುರಿಯಿಂದ ಅಪರೂಪದ ಸಾಧನೆಯನ್ನು ತನ್ನದಾಗಿಸಿಕೊಂಡಿದ್ದಾರೆ. ದಶಕದ ಕಠಿಣ ಪರಿಶ್ರಮದ ಫಲವಾಗಿ ಕಳೆದ ಎರಡು ವರ್ಷಗಳಲ್ಲಿ ಗಿನ್ನಿಸ್ ದಾಖಲೆಗಳನ್ನು ಮಾಡಿದ್ದಾರೆ.
ಓಟಗಾರನ ಟ್ರ್ಯಾಕ್:
ಶಾಲಾ-ಕಾಲೇಜು ದಿನಗಳಲ್ಲಿ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರೂ ಪ್ರೋತ್ಸಾಹದ ಕೊರತೆ ಕಾಡುತ್ತಿತ್ತು. ಆದರೆ ರಕ್ಷಿತ್ ಶೆಟ್ಟಿ ಅವರಲ್ಲಿದ್ದ ಓಟಗಾರನ ಕನಸು ಕಮರಲಿಲ್ಲ. ಹಣಕಾಸಿನ ತೊಂದರೆಯಿಂದ ಸೂಕ್ತ ತರಬೇತಿಯೂ ಇಲ್ಲದಂತಾಗಿತ್ತು. ಬಿಕಾಂ ವ್ಯಾಸಂಗ ಮುಗಿಸಿ, ಮುಂಬೈಯ ಟ್ರಾವೆಲ್ ಏಜೆನ್ಸಿ ಕಚೇರಿ, ಹೊಟೇಲ್ ನಲ್ಲಿ ಕೆಲಸವನ್ನು ಮಾಡಿದ್ದಾರೆ. ಕೆಲಸದ ಜೊತೆ ಬೆಳಿಗ್ಗೆ ಹಾಗೂ ಸಾಯಂಕಾಲ ಓಟದ ಅಭ್ಯಾಸ ಮಾಡಲು ಪ್ರಾರಂಭಿಸಿದ ರಕ್ಷಿತ್ ಅವರಿಗೆ ಸಮಯವನ್ನು ಸರಿದೂಗಿಸುವುದು ಕೂಡ ಕಷ್ಟಸಾಧ್ಯವಾಗಿತ್ತು. ಆದರೆ ಮುಂಬೈಯಲ್ಲಿ ನಡೆಯುಯತ್ತಿದ್ದ ಮ್ಯಾರಥಾನ್ ಗಳು ಅವರಿಗೆ ಪ್ರೇರಣೆದಾಯಕವಾಗಿ ಅವರ ಗುರಿಯನ್ನು ಎಚ್ಚರಿಸುತ್ತಿದ್ದವು. 2008ರಲ್ಲಿ ಮುಂಬೈ ಮ್ಯಾರಥಾನ್ 42 ಕಿ.ಮೀ ಅನ್ನು ಮೊದಲ ಬಾರಿಗೆ ಸ್ಪರ್ಧಿಸಿ, ಆತ್ಮ ವಿಶ್ವಾಸಗಳನ್ನು ಹೆಚ್ಚಿಸಿಕೊಂಡರು. 2009, 2010ರ ಮ್ಯಾರಥಾನ್ ನಲ್ಲಿ ಭಾಗವಹಿಸಿ, ದೀರ್ಘ ಓಟಕ್ಕೆ ಬೇಕಾದ ಸಾಮರ್ಥ್ಯವನ್ನು ವೃದ್ಧಿಸಿಕೊಂಡರು. 2009ರಲ್ಲಿ ಮಲಾಡ್ ರೇಸ್ ನ 10 ಕಿ.ಮೀ ಅನ್ನು 40 ನಿಮಿಷ್ 18 ಸೆಕೆಂಡ್ ಗಳಲ್ಲಿ ಕ್ರಮಿಸಿದರು. 2010ರಲ್ಲಿ ಮತ್ತೊಮ್ಮೆ ನಡೆದ ಮಲಾಡ್ ರೇಸ್ ನಲ್ಲಿ 10 ಕಿ.ಮೀ ಅನ್ನು 38 ನಿಮಿಷ 6 ಸೆಕೆಂಡ್ ಗಳಲ್ಲಿ ಕ್ರಮಿಸಲು ಸಫಲರಾದರು. ಬಂಟ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 1500 ಮೀಟರ್ ವಿಭಾಗದಲ್ಲಿ ಬಹುಮಾನ ಗಳಿಸಿದರು, ಗಿನ್ನಿಸ್ ದಾಖಲೆಗೆಂದೇ ಆಯೋಜನೆಗೊಂಡ ನವಿ ಮುಂಬೈ ಬೇರ್ಫೂಟ್ ಹಾಫ್ ಮ್ಯಾರಥನ್ ನಲ್ಲಿ ಭಾಗವಹಿಸಿ, ಮೆರಿಟ್ ಸರ್ಟಿಫೀಕೆಟ್ ಗೆ ಅರ್ಹರಾದರು. 2011ರಲ್ಲಿ ಮುಂಬೈನಲ್ಲಿ ನಡೆದ ಆಹಾರ್ ಟ್ರೋಫಿ ಕ್ರೀಡಾಕೂಟದ 3000ಮೀ ಹಾಗೂ 1500ಮೀ ವಿಭಾಗದಲ್ಲಿ ಪ್ರಥಮ ಸ್ಥಾನವು ಸಾಧಕನಿಗೆ ಪ್ರೇರಣೆಯಾಯಿತು. 2012ರಲ್ಲಿ ನಡೆದ ಮುಂಬೈ ಹಾಫ್ ಮ್ಯಾರಥಾನ್ನಲ್ಲಿ 1ಗಂಟೆ 29ನಿಮಿಷಗಳ ಸಾಧನೆಯನ್ನು ಮಾಡಿದರು. ಆ ಬಳಿಕ ಥಾಣೆ ಮ್ಯಾರಥಾನ್, ಕಂಡಿವಲಿ ಮ್ಯಾರಥಾನ್, ಮೀರಾರೋಡ್ ರೇಸಸ್ನಂತಹ ಅವಕಾಶಗಳನ್ನು ತನ್ನ ಸಾಧನೆಯ ಮೆಟ್ಟಿಲುಗಳನ್ನಾಗಿಸಲು ಸಫಲರಾದರು.
2014ರಲ್ಲಿ ವಿಭಿನ್ನ ವೇಷಭೂಷಣ ಧರಿಸಿ 9 ರೇಸ್ ಗಳನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ರಕ್ಷಿತ್ ಶೆಟ್ಟಿಯವರದ್ದು. 2014ರಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಟಿಸಿಎಸ್ 10ಕಿ.ಮೀ ರೇಸ್ನಲ್ಲಿ ಗಿನ್ನಿಸ್ ದಾಖಲೆ ರಕ್ಷಿತ್ ಗಳಿಸಿದರು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ದ್ವಿತೀಯ ಸ್ಥಾನ, ಕಾವೇರಿ ಟ್ರೆಯಲ್ ಮ್ಯಾರಥಾನ್ನಲ್ಲಿ ನಾಲ್ಕನೇ ಸ್ಥಾನ ಪಡೆದರು. 2015ರಲ್ಲಿ ಮುಂಬೈ ಮ್ಯಾರಥಾನ್ ನಲ್ಲಿ ಭಾಗವಹಿಸಿದರು. 2015ರಲ್ಲಿ ಮತ್ತೆ ಎರಡು ಗಿನ್ನಿಸ್ ದಾಖಲೆಗಳನ್ನು ತನ್ನ ಸಾಧನೆಯ ಮೂಲಕ ಗಳಿಸಿದ್ದಾರೆ.
ಗಿನ್ನಿಸ್ ದಾಖಲೆಯ ಹೆಜ್ಜೆ ಗುರುತು:
* 2014ರ ಮೇ 18ರಂದು ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವಲ್ಡ್ 10ಕಿ,ಮೀ ಅನ್ನು ಹುಲಿವೇಷ ಧರಿಸಿ 43ನಿಮಿಷ 2 ಸೆಕೆಂಡ್ಗಳಲ್ಲಿ ಕ್ರಮಿಸಿದ್ದಾರೆ.
* 2014 ಸೆಪ್ಟೆಂಬರ್ 7ರಂದು ಮೈಸೂರಿನಲ್ಲಿ ನಡೆದ 10 ಕಿ.ಮಿ ಅನ್ನು 42ನಿಮಿಷ 57 ಸೆಕೆಂಡ್ಸ್ನಲ್ಲಿ ಕ್ಯಾರೆಟ್ ತರಕಾರಿ ವೇಷ ಧರಿಸಿ ದಾಖಲೆಯೊಂದಿಗೆ ಓಟ ಪೂರ್ಣಗೊಳಿಸಿದ್ದಾರೆ.
* 2015ರ ಅಕ್ಟೋಬರ್ 18ರಂದು ಬೆಂಗಳೂರಿನಲ್ಲಿ ನಡೆದ ಹಾಫ್ ಮ್ಯಾರಥಾನ್ ಅನ್ನು ಲವ್ಹಾಟರ್್ ವೇಷ ಧರಿಸಿ 1 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದಾರೆ.
* 2015ರ ಡಿಸೆಂಬರ್ 5ರಂದು ನಡೆದ ಎಸ್ಬಿಐ ಬೆಂಗಳೂರು ಮಿಡ್ನೈಟ್ ಹಾಫ್ ಮ್ಯಾರಥಾನ್ನಲ್ಲಿ ಸಂಗೀತ ಪರಿಕರದ ವೇಷದೊಂದಿಗೆ 1ಗಂಟೆ 26 ನಿಮಿಷ 57 ಸೆಕೆಂಡ್ಸ್ನ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಎಳವೆಯಿಂದಲೇ ಇದ್ದ ಓಟಗಾರನಾಗುವ ಕನಸು. ಅದಕ್ಕೆ ಪೂರಕವಾದ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಹಣಕಾಸಿನ ತೊಂದರೆಯಿಂದ ಮರೆಯಾಗುತ್ತಿರುವ ಪ್ರತಿಭೆಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು.
-ರಕ್ಷಿತ್ ಶೆಟ್ಟಿ
ಗಿನ್ನಿಸ್ ದಾಖಲೆ ಮಾಡಿದ ಓಟಗಾರ