News Karnataka Kannada
Saturday, April 27 2024
ಕರಾವಳಿ

ಕರಾವಳಿ ಸಹಿತ ನಾಡಿನೆಲ್ಲೆಡೆ ಗಣೇಶ ಚತುದರ್ಶಿ ಸಂಭ್ರಮ

Photo Credit :

ಕರಾವಳಿ ಸಹಿತ ನಾಡಿನೆಲ್ಲೆಡೆ ಗಣೇಶ ಚತುದರ್ಶಿ ಸಂಭ್ರಮ

ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಆರಂಭದಲ್ಲಿ ಪ್ರಥಮ ಪೂಜೆ ಗಣೇಶನಿಗೆ ಸಲ್ಲುವುದು ಸಂಪ್ರದಾಯ. ಮಹಾಭಾರತ ಕಾಲದಿಂದಲೂ ಗಣೇಶ ಪೂಜೆ ಅಭಾವ ಗಣೇಶ ವೃತ ಆಚರಣೆ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣ ಪರಮಾತ್ಮನೇ ಗಣೇಶ ವ್ರತವನ್ನು ಆಚರಿಸಿದ್ದಾನೆ ಎಂದು ಉಲ್ಲೇಖವಿದೆ.

ಗಣೇಶನು ಮಂಗಳಕಾರಕನು, ವಿಘ್ನ ನಿವಾರಕನು, ವಿದ್ಯೆ, ಬುದ್ಧಿ, ಅಭೀಷ್ಟ ಪ್ರದಾಯಕನು ಆಗಿದ್ದಾನೆ. ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ತಿಥಿಯೆಂದು ಭಗವಾನ್ ಶ್ರೀ ಗಣೇಶನ ಅವತಾರವಾಯಿತು ಎಂದು ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಉಲ್ಲೇಖವಿದೆ. ಈತನಿಗೆ ಅನೇಕ ನಾಮಗಳಿಂದ ಕರೆಯುತ್ತಿದ್ದು. ಗಜಾನನ, ವಿನಾಯಕ, ಗಣೇಶ, ಗಣಪತಿ, ಲಂಬೋದರ ಮುಂತಾದ 108 ನಾಮಗಳಿಂದ ಸ್ತುತಿಸುತ್ತಾರೆ. ಗಣಪತಿಯನ್ನು ಸಂಕಟ ನಿವಾರಕನೆಂದು ಕರೆಯುತ್ತಾರೆ.

ಈತನಿಗೆ ಪ್ರಿಯವಾದ ಚತುರ್ಥಿ ಸಂಕಷ್ಟ ಚತುರ್ಥಿ ಭಗವದ್ಭಕ್ತರು ಈ ದಿನವನ್ನು ವೃತವನ್ನು ಆಚರಿಸುತ್ತಾರೆ. ಅಲ್ಲದೆ ಮಂಗಳವಾರ ಸಂಕಷ್ಟ ಚತುರ್ಥಿ ಬಂದ ಈ ದಿನ ವೃತವನ್ನು ಆಚರಿಸಿದರೆ 1008 ಬಾರಿ ವೃತ ಆಚರಣೆಯ ಫಲ ದೊರೆಯುತ್ತದೆ.

ಕಥೆಯ ಪ್ರಕಾರ ಪಾರ್ವತಿಯು ಸ್ನಾನ ಮಾಡಲೆಂದು ಹೋಗುವಾಗ ಮಣ್ಣಿನಿಂದ ಒಂದು ಬಾಲಕನ ವಿಗ್ರಹ ಮಾಡಿ ಅದಕ್ಕೆ ಜೀವ ನೀಡಿ ಸ್ನಾನ ಗೃಹದ ದ್ವಾರದಲ್ಲಿ ಕಾವಲಿಟ್ಟು ತಾನು ಸ್ನಾನ ಮಾಡಲು ಹೋಗುತ್ತಾಳೆ. ಆ ಸಂದರ್ಭದಲ್ಲಿ ಆಗಮಿಸಿದ ಶಿವನನ್ನು ಬಾಲಕನು ತಡೆದಾಗ ಕುಪಿತಗೊಂಡ ಶಿವನು, ಬಾಲಕನ ರುಂಡವನ್ನು ತನ್ನ ತ್ರಿಶೂಲದಿಂದ ಛೇದಿಸುತ್ತಾನೆ. ಜಗನ್ಮಾತೆ ಪಾರ್ವತಿ ದೇವಿ ಮತ್ತು ಎಲ್ಲಾ ದೇವತೆಗಳು ಪರಶಿವನನ್ನು ಪ್ರಾರ್ಥಿಸಿದಾಗ ಉತ್ತರ ಭಾಗದಲ್ಲಿ ತಲೆಯನ್ನಿಟ್ಟು ಮಲಗಿದ ಯಾವುದೇ ಪ್ರಾಣಿಯ ತಲೆಯನ್ನು ತನ್ನಿ ಎಂದು ತನ್ನ ಗಣಗಳಿಗೆ ಅಪ್ಪಣೆ ನೀಡಿದಾಗ ಆನೆಯೊಂದರ ಶಿರವನ್ನು ತಂದು ನೀಡಿ ಜೋಡಣೆಯನ್ನು ಶಿವನು ಮಾಡುತ್ತಾನೆ. ಈ ಕಾರಣಕ್ಕೆ ಇಂದಿಗೂ ಆನೆಯನ್ನು ಗಣೇಶನ ಪ್ರತಿರೂಪವೆಂದು ಗೌರವಿಸುತ್ತಾರೆ.

ಹಿಂದಿನ ಕಾಲದಲ್ಲಿ ಗಣೇಶ ಚತುರ್ಥಿಯನ್ನು ಭಯಭಕ್ತಿಗಳಿಂದ ಆಚರಿಸುತ್ತಿದ್ದರು. ಇಂದು ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಭಯ-ಭಕ್ತಿ, ಶ್ರದ್ಧೆ ಧರ್ಮಕ್ಕೆ ಮಹತ್ವ ಇಲ್ಲ. ಪ್ರತಿಷ್ಠೆ ಹಣ ಬಲ ತೋಳ್ಬಲವೇ ಪ್ರಧಾನ. ಸುಮಾರು ೨೫-೩೦ ವರ್ಷಗಳ ಹಿಂದೆ ನಿಸರ್ಗಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಕಲಾಕಾರರು ಜೇಡಿ ಮಣ್ಣಿನಿಂದ ತಯಾರಿಸಿದ ಗಣಪನ ವಿಗ್ರಹಗಳನ್ನು ಪೂಜಿಸುತ್ತಿದ್ದರು.

ಕಾಲಚಕ್ರ ಉರುಳಿದ ಹಾಗೇ ಗಣೇಶೋತ್ಸವ ಕೂಡ ನವ್ಯ ಹಾದಿ ತುಳಿದ ಪರಿಣಾಮ ಇವತ್ತು ಜೇಡಿ ಮಣ್ಣಿನ ವಿಗ್ರಹಕ್ಕೆ ಕವಡೆ ಕಾಸು ಬೆಲೆ ಇಲ್ಲದಾಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ, ಭಟ್ಕಳ, ಕಾರವಾರ ಮುಂತಾದ ಕಡೆಗಳಲ್ಲಿ ಇಂದಿಗೂ ಜೇಡಿ ಮಣ್ಣಿನ ವಿಗ್ರಹವನ್ನು ನಾವು ಕಾಣಬಹುದು.

ಆದರೆ ಮುಂಬಯಿ ಮತ್ತು ದೇಶದ ಇನ್ನಿತರ ಕಡೆಯಲ್ಲೆಲ್ಲಾ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಗಣಪತಿಯ ವಿಗ್ರಹಗಳನ್ನು ತಯಾರಿಸಿ ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಗೆ ಕಬ್ಬಿಣದ ಸಲಾಕೆ ಉಪಯೋಗಿಸುತ್ತಾರೆ. ಹೆಚ್ಚಿನ ರಾಜ್ಯದ ಮಹಾನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾರಾಜಿಸುವ ಗಣಪನ ಹುಟ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದು. ಭಾರೀ ಪ್ರಮಾಣದಲ್ಲಿ ಗಣಪತಿ ವಿಗ್ರಹಗಳನ್ನು ಪೂಜಿಸಿ ನದಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

ಇದರಿಂದ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದ್ದು, ನೀರು ವಿಷಯುಕ್ತವಾಗುತ್ತದೆ. ಈ ಕಾರಣಕ್ಕಾಗಿ ಕೆಲವು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಗಣೇಶೋತ್ಸವವನ್ನು ಆಚರಿಸುವ ಸಂಘಟನೆಗಳು ನಿಸರ್ಗಕ್ಕೆ ಬಾಧಕವಾಗದ ಜೇಡಿಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮತ್ತು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸುವಂತೆ ಸೂಚಿಸಿದರೂ ಪೈಪೋಟಿಗೆ ಬಿದ್ದಿರುವ ಸಮಾಜವು ಲೆಕ್ಕಕ್ಕೇ ತೆಗೆದುಕೊಳ್ಳದೇ ಕೋಟ್ಯಂತರ ಹಣವನ್ನು ವ್ಯಯಿಸಿ ಅದ್ಧೂರಿಯಾಗಿ ‘ಗಣಪತಿ ಬಪ್ಪ ಮೋರ್ಯ’ ಎಂದು ಕೂಗುತ್ತಾ ಗಣೇಶನ ಮೆರವಣಿಗೆ ನಿರಂತರ ನಡೆದು ನೀರಿನಲ್ಲಿ ವಿಸರ್ಜಿಸುವ ಪರಿಪಾಠ ಮುಂದುವರಿದರೆ, ಕಾಲಕ್ರಮೇಣ ಎಲ್ಲವೂ ವಿಷಯುಕ್ತವಾಗುವುದು ಖಚಿತ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು