ಕಾರ್ಕಳ: ಶಿರ್ಲಾಲು ಶ್ರೀ ಆದಿನಾಥಸ್ವಾಮಿ ಬಸದಿಯಲ್ಲಿ ಕಳವು ಆಗಿರುವ ಲಕ್ಷಾಂತರ ಬೆಲೆಬಾಳುವ ಅಮೂಲ್ಯ ಪಂಚಲೋಹ ವಿಗ್ರಹಗಳು ಅಂಡಾರು ಮಂಗಪ್ಪಾಡಿ ಎಂಬಲ್ಲಿ ಪತ್ತೆಯಾಗಿದೆ.
ಫೆಬ್ರವರಿ 21 ರವಿವಾರ ನಸುಕಿನ ಜಾವದಲ್ಲಿ ಐತಿಹಾಸಕ ಹಿನ್ನಲ್ಲೆಯುಳ್ಳ ಶಿರ್ಲಾಲು ಶ್ರೀ ಆದಿನಾಥ ಸ್ವಾಮಿಯ ಬಾಗಿಲು ಮುರಿದು ದುಷ್ಕರ್ಮಿಗಳು, ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ದುರುದ್ದೇಶದಿಂದ ಅಕ್ರಮವಾಗಿ ಪ್ರವೇಶಗೈದು ಅಲ್ಲಿ ಆರಾಧಿಸಲಾಗುತ್ತಿದ್ದ ಪದ್ಮಾವತಿ ಅಮ್ಮನ, ಬಾಹುಬಲಿ, ಮೂಲ ಆದಿನಾಥ ಸ್ವಾಮಿ, ಭರತ ದೇವರುಗಳ ವಿಗ್ರಹಗಳು, ಚಿನ್ನದ ಮುಖವಾಡ, ಬಂಗಾರದನಾಗ ಹೆಡೆ, ಬೆಳ್ಳಿಯ ಪ್ರಭಾವಳಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಕಳವುಗೈದಿದ್ದರು.
ಮೂರು ದಿನಗಳಿಂದ ಸ್ಥಳದಲ್ಲಿ ಇದ್ದ ಗೋಣಿಚೀಲ!
ಕಳೆದ ಮೂರುದಿನಗಳಿಂದ ಅಂಡಾರು ಮಂಗಪ್ಪಾಡಿಯಲ್ಲಿ ಅನುಮಾನಸ್ವದ ರೀತಿಯಲ್ಲಿ ಗೋಣಿ ಚೀಲವೊಂದು ಕಂಡು ಬಂದಿತ್ತಾದರೂ ಅದರತ್ತ ಯಾರು ಗಮನ ಹರಿಸಲಿಲ್ಲ. ಶುಕ್ರವಾರ ಬೆಳಿಗ್ಗೆ ಶ್ರೀಧರ್ ಆಚಾರ್ಯ ಗಮನಿಸಿ ಅದರತ್ತ ತೆರಳುತ್ತಿದ್ದಾಗ ಅಲ್ಲಿಂದ ಜೀನ್ಸ್ ಪ್ಯಾಂಟ್ ಧರಿಸಿದ್ದ ಅಪರಿಚಿತ ಯುವಕರು ಪರಿಸರ ಕಾಡು ಮಾರ್ಗವಾಗಿ ಕಾಲಿಗೆ ಬುದ್ದಿಹೇಳಿದ್ದರೆಂದು ತಿಳಿದುಬಂದಿದೆ.
ಯುವಕರ ವರ್ತನೆಯೂ ವಾರಿಸ್ತುದಾರರು ಇಲ್ಲದಿದ್ದ ಗೋಣಿಚೀಲದ ಬಗ್ಗೆ ಇನ್ನಷ್ಟು ಅನುಮಾನಗಳು ಅವರಲ್ಲಿ ಹೆಚ್ಚಾಗಿ ಗೋಣಿಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಅತ್ಯಾಮೂಲ್ಯವಾದ ದೇವರ ವಿಗ್ರಹಗಳು ಪತ್ತೆಯಾಗಿತ್ತು. ಅವೆಲ್ಲವು ಶಿರ್ಲಾಲು ಬಸದಿಗೆ ಸಂಬಂಧಿಸಿದಾಗಿತ್ತೆಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಮೂಲದೇವರು ಆದಿನಾಥ ಸ್ವಾಮಿಯ ವಿಗ್ರಹದ ಕೈ ಭಗ್ನಗೊಂಡಿದೆ. ಪದ್ಮಾವತಿ ದೇವರ ವಿಗ್ರಹ ಹಾಗೂ ಇತರ ಪರಿಕರಗಳು ಇನ್ನೂ ಪತ್ತೆಯಾಗಿಲ್ಲ. ವಿಗ್ರಹದಲ್ಲಿ ಇರುವಂತಹ ಲೋಹದ ಪರಿಶೀಲನೆಗಾಗಿ ರಾಸಾಯನಿಕ ದ್ರಾವಣವನ್ನು ಬಳಸಿರುವುದರಿಂದ ಪತ್ತೆಯಾದ ವಿಗ್ರಹಗಳು ಮತ್ತಷ್ಟು ಒಳಪು ನೀಡುತ್ತಿದೆ.
ಪರಿಸರದ ಶ್ವಾನಗಳ ಮಾರಣ ಹೋಮಕ್ಕೂ ಕಳವು ಕೃತ್ಯಕ್ಕೂ ಎತ್ತಣ ಸಂಬಂಧ
ಬಸದಿ ಹಾಗೂ ಪರಿಸರದಲ್ಲಿ ಇದ್ದಂತಹ ಸಾಕು ನಾಯಿಗಳು ಕೃತ್ಯ ನಡೆದ ಐದು ದಿನಗಳ ಅಂತಹದಲ್ಲಿ ಸರಣಿಯಂತೆ ಸಾವಿಗೀಡಾಗಿದ್ದವು. ಇವುಗಳಿಗೆ ಯಾವುದಾದರೂ ವಿಷ ಪಾಷಣ ಇಕ್ಕಿ ಇದೇ ತಂಡ ಮಾರಣಹೋಮ ನಡೆಸಲಾಗಿತ್ತೇ ಎಂಬ ಯಕ್ಷ ಪ್ರಶ್ನೆಗಳು ಸ್ಥಳೀಯರಲ್ಲಿ ಕಾಡತೊಡಗಿದೆ. ಪರಿಸರದಲ್ಲಿ ಶ್ವಾನಗಳೇ ಇಲ್ಲದೇ ಹೋದುದರಿಂದ ದುಷ್ಕರ್ಮಿಗಳಿಗೆ ತಮ್ಮ ಕೃತ್ಯಯನ್ನು ಸುಲಲಿತಾವಾಗಿ ನಡೆಸಲು ಸಾಧ್ಯವಾಗಿದೆ.
ಸೊತ್ತುಗಳ ಪತ್ತೆಯೂ ಕೊಡಮಣಿತ್ತಾಯ ದೈವಶಕ್ತಿಯೂ…
ಅಂಡಾರು ಕೊಡಮಣಿತ್ತಾಯ ದೈವವನ್ನು ಊರ-ಪರವೂರ ಜನತೆ ಭಯ-ಭಕ್ತಿಯಿಂದ ನಂಬಿಕೊಂಡು ಬರುತ್ತಿದ್ದಾರೆ. ದೈವಕ್ಕೆ ಹರಕೆ ಸಂದಾಯ ಮಾಡಿದರೆ ನ್ಯಾಯದ ಕಡೆಗೆ ಜಯ ಕಟ್ಟಿಟ್ಟಬುತ್ತಿ ಎಂದರೂ ತಪ್ಪಿಲ್ಲ. ವಾರದ ಹಿಂದೆಯಷ್ಟೇ ವರ್ಷಪ್ರತಿ ನಡೆಯುವ ನೇಮೋತ್ಸವ ಸಂದರ್ಭದಲ್ಲಿ ಶಿರ್ಲಾಲು ಬಸದಿ ಕಳವು ಕೃತ್ಯದ ಬಗ್ಗೆ ದೂರು ಸಂದಾಯವಾಗಿತ್ತೆಂದು ತಿಳಿದುಬಂದಿದೆ. ಜಾಗದ ನಂಬಿಕೆಯ ಇದ್ದಲ್ಲಿ ಶಕ್ತಿಯ ಮೂಲಕ ಪ್ರತಿಫಲ ನೀಡುವ ಭರವಸೆ ದೈವ ನೀಡಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇಂತಹ ಕಾರಣಿಕ ಶಕ್ತಿಯೂ ಕೇವಲ ಒಂದು ವಾರದೊಳಗಾಗಿ ಕೊಡಮಣಿತ್ತಾಯ ದೈವ ತನ್ನ ಅಗ್ರಸ್ಥಾನದ ಅಂಡಾರಿನಲಿಯೇ ತೋರಿಸಿಕೊಟ್ಟಿರುವುದು ಜನತೆಯಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.