ಉಡುಪಿ: ಇಂದು ಮಹಾಲಯ ಅಮವಾಸ್ಯೆ, ಇದು ಪಿತೃಗಳನ್ನು ನೆನೆಯುವ ದಿನ, ಕಡಲ ತೀರಕ್ಕೆ ತೆರಳಿ ಸಮುದ್ರ ಸ್ನಾನ ಕೈಗೊಂಡು, ತರ್ಪಣೆ ಬಿಟ್ಟರೆ ನಮ್ಮನ್ನಗಲಿದ ಆತ್ಮಗಳಿಗೆ ಮೋಕ್ಷ ದೊರೆಯುತ್ತೆ ಅನ್ನೋದು ನಂಬಿಕೆ, ಹಾಗಾಗಿ ಕರಾವಳಿಯ ಕಡಲ ತೀರದಲ್ಲಿ ಸಾವಿರಾರು ಜನರು ಈ ಪುಣ್ಯಕಾರ್ಯ ಕೈಗೊಂಡರು.
ದೇವರಿಗೆ ತೀರಿಸುವ ಹರಕೆಗಳಲ್ಲಿ ವಿಳಂಬವಾದರೂ ತೊಂದರೆಯಿಲ್ಲ, ಪಿತೃಗಳಿಗೆ ನಿಗದಿಯಾದ ದಿನವೇ ತರ್ಪಣ ನೀಡಬೇಕು ಅನ್ನೋದು ಜನರ ನಂಬಿಕೆ. ಹಾಗಾಗಿ ಮಹಾಲಯ ಅಮವಾಸ್ಯೆಯ ದಿನ ಬಹುತೇಕ ಜನರು ಶೃದ್ಧೆಯಿಂದ ಈ ಕಾರ್ಯ ಕೈಗೊಳ್ತಾರೆ. ಮುಂಜಾನೆಯಿಂದಲೇ ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನರು ಪಿತೃಕಾರ್ಯ ಕೈಗೊಂಡರು. ಮೊದಲು ಸಮುದ್ರದಲ್ಲಿ ಮಿಂದು ಬಳಿಕ ತಿಲಾ ಹೋಮ ನಡೆಸಿ, ತರ್ಪಣ ಬಿಟ್ಟರು.
ಅಮವಾಸ್ಯೆಯ ದಿನ ಕೈಗೊಳ್ಳುವ ಸಮುದ್ರ ಸ್ನಾನಕ್ಕೂ ವಿಶೇಷ ಮಹತ್ವ ಇದೆ. ಈ ಬಾರಿ ಮಳೆ ಕಡಿಮೆ ಇದ್ದುದರಿಂದ ಪೂಜೆಯಲ್ಲಿ ಭಾಗವಹಿಸಿದವರ ಸಂಖ್ಯೆಯೂ ಹೆಚ್ಚಾಗಿತ್ತು. ಪಿತೃ ತರ್ಪಣದಿಂದ ಕುಟುಂಬಕ್ಕೆ ಏಳಿಗೆ ಆಗುತ್ತೆ, ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಅನ್ನೋದು ಈ ಭಾಗದ ಜನರ ನಂಬಿಕೆ, ಇಂದು ಪಿತೃ ತರ್ಪಣ ಬಿಟ್ಟರೆ ಹಿರಿಯರ ಆತ್ಮಗಳಿಗೆ ಮೋಕ್ಷ ದೊರಕುತ್ತಂತೆ, ಮಲ್ಪೆ ಮಾತ್ರವಲ್ಲದೆ ಕರಾವಳಿ ತೀರದುದ್ದಕ್ಕೂ ವೈದಿಕರ ಮೂಲಕ ಈ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು.