ಮಂಗಳೂರು: ನಗರದ ಹೊರವಲಯದ ಬಜ್ಪೆ ಬಳಿ ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ.
ಬಜ್ಪೆ ಸಮೀಪ ರಸ್ತೆ ಡಾಂಬರೀಕರಣಕ್ಕಾಗಿ ಡಾಂಬರು ಡಬ್ಬಿಗಳನ್ನು ಇಡಲಾಗಿತ್ತು. ಈ ವೇಳೆ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಡಾಂಬರು ಡಬ್ಬಿ ಒಳಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು, ಡಾಂಬರಿನಲ್ಲಿ ಅದ್ದಿ ಹೋಗಿದ್ದ ನಾಯಿಯನ್ನು ಮೇಲೆತ್ತಿದ್ದಾರೆ.
ಕೂಡಲೇ ತಮ್ಮ ಶಕ್ತಿನಗರದ ಅನಿಮಲ್ ಕೇರ್ ಸೆಂಟರಿಗೆ ಕೊಂಡೊಯ್ದು ಸುಮಾರು ಹತ್ತು ಲೀಟರ್ನಷ್ಟು ಅಡುಗೆ ಎಣ್ಣೆಯನ್ನು ನಾಯಿಯ ಮೈಗೆ ಸುರಿದಿದ್ದಾರೆ. ನಿಧಾನಕ್ಕೆ ನಾಯಿ ಮೈಯಲ್ಲಿ ಅಂಟಿದ್ದ ಹತ್ತು ಕೆಜಿಯಷ್ಟು ಡಾಂಬರನ್ನು ಬಟ್ಟೆಯಿಂದ ಉಜ್ಜಿ ತೆಗೆದಿದ್ದಾರೆ. ಸದ್ಯ ನಾಯಿ ಚೇತರಿಕೆ ಕಂಡಿದ್ದು ಮರುಜನ್ಮ ಪಡೆದಂತಾಗಿದೆ.