ಉಡುಪಿ: ಕೆಲವು ಸಮಯಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಕಡೆಗೂ ಶುಕ್ರವಾರ ತಡರಾತ್ರಿ ಬೋನಿಗೆ ಬಿದ್ದಿದೆ.
ಹಲವು ದಿನಗಳಿಂದ ಕುಂದಾಪುರ ತಾಲೂಕಿನ ಕಾಳಾವರದ ಪರಿಸರದ ಜನರ ನಿದ್ದೆ ಕದ್ದಿದ್ದ ಚಿರತೆ, ಕಕ್ಕೇರಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ವಾರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಬೆನ್ನಲ್ಲಿ, ಚಂದ್ರಶೇಖರ ಹೆಗ್ಡೆ ಎನ್ನುವವರ ಜಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ವಾರ ಬೋನ್ ಇಟ್ಟು ನಾಯಿ ಕಟ್ಟಿ ಚಿರತೆ ಸೆರೆಗೆ ಕಾರ್ಯತಂತ್ರ ರೂಪಿಸಿದ್ದರು.
ವಾರದ ಬಳಿಕ ಚಿರತೆ ಸೆರೆಯಾಗಿದ್ದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಸೆರೆಯಾಗಿದ್ದ 4-5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ತಡರಾತ್ರಿಯೇ ವನ್ಯಜೀವಿ ವಲಯಕ್ಕೆ ರವಾನಿಸಿ ಸುರಕ್ಷಿತವಾಗಿ ಬಿಡಲಾಯಿತು. ಇನ್ನಷ್ಟು ಚಿರತೆಗಳ ಓಡಾಟದ ಕುರಿತು ದೂರು ಇರುವ ಹಿನ್ನಲೆಯಲ್ಲಿ ಮತ್ತೆ ಬೋನು ಇಡಲಾಗಿದೆ. ಡಿ.ಎಫ್.ಒ ಪ್ರಭಾಕರನ್ ಮಾರ್ಗದರ್ಶನದಲ್ಲಿ ಈ ಚಿರತೆ ಸೆರೆ ಕಾರ್ಯಾಚರಣೆ ನಡೆದಿದೆ.