ಬೆಂಗಳೂರು: ಭ್ರಷ್ಟಾಚಾರ ಪ್ರಕರಣದ ಆರೋಪ ಹೊತ್ತುಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶನಿವಾರ ಸಂಜೆ ಬೆಂಗಳೂರು ಕ್ರೈಂ ಬ್ರಾಂಚ್ ಕಚೇರಿಗೆ ಹಾಜರಾದರು.
ಕಳೆದ ಮೂರು ದಿನಗಳಿಂದ ರೆಡ್ಡಿ ಅವರು ನಾಪತ್ತೆಯಾಗಿದ್ದರು. 49ರ ಹರೆಯದ ರೆಡ್ಡಿ ಗಣಿ ಹಗರಣದಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು ಮತ್ತು 2015ರಲ್ಲಿ ಜಾಮೀನು ಪಡೆದು ಹೊರಬಂದಿದ್ದರು.
18 ಕೋಟಿ ರೂ. ಲಂಚ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ಬೇಕಾಗಿದ್ದ ರೆಡ್ಡಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.
ಅಂಬಿಡೆಂಟ್ ಗ್ರೂಪ್ ಎಂಬ ಖಾಸಗಿ ಕಂಪೆನಿಯ ಮಾಲಕನು ಸುಮಾರು 600 ಕೋಟಿ ರೂಪಾಯಿಯನ್ನು ಜನರಿಗೆ ವಂಚಿಸಿದ್ದ. ಇದರಿಂದ ಹೊರಗೆ ಬರಲು 18 ಕೋಟಿ ರೂ.ನೀಡಬೇಕೆಂದು ರೆಡ್ಡಿ ಬೇಡಿಕೆಯನ್ನಿಟ್ಟಿದ್ದರು ಎನ್ನುವ ಆರೋಪವಿದೆ.