ಉಡುಪಿ: ರಾಜ್ಯದಲ್ಲಿ ಟಿಪ್ಪು ಜಯಂತಿ ಸಂಪೂರ್ಣ ವಿಫಲವಾಗಿದೆ. ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿಯನ್ನು ಪರೋಕ್ಷವಾಗಿ ಬಹಿಷ್ಕರಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಟಿಪ್ಪು ಜಯಂತಿ ಹಿನ್ನೆಲೆ ಮಾಧ್ಯಮದವರ ಜೊಗೆ ಮಾತನಾಡಿದ ಕೋಟ, ದೇವೇಗೌಡರು ಬಿಜೆಪಿ ಜೊತೆಗಿನ ಸಖ್ಯವನ್ನು ಈ ಮೂಲಕ ಜೀವಂತ ಇಟ್ಟಿದ್ದಾರೆ. ಟಿಪ್ಪು ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿಯಬಹುದು. ಮೈತ್ರಿ ಮುರಿದರೆ ದೇವೇಗೌಡರು ಬಿಜೆಪಿ ಜೊತೆಗಿನ ಹಾದಿ ಮುಕ್ತವಾಗಿಟ್ಟಿದ್ದಾರೆ. ಮುಂದಿನ ಎಲ್ಲಾ ವಿವೇಚನೆ ದೇವೇಗೌಡರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
ಅಬ್ಬಕ್ಕ, ಕಿತ್ತೂರು ಚೆನ್ನಮ್ಮ ರಾಯಣ್ಣ ರಾಷ್ಟ್ರಭಕ್ತರು
ಸ್ವಾತಂತ್ರ್ಯ ಹೋರಾಟಗಾರರಿಗೆ ಟಿಪ್ಪುವನ್ನು ಹೋಲಿಸಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪೂಜಾರಿ ಎಚ್ಚರಿಸಿದ್ದಾರೆ.
ಟಿಪ್ಪು ಹಿಂದೂ, ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದಾತ. ಸಿದ್ದರಾಮಯ್ಯ ಸತ್ಯವನ್ನು ಅರಿಯುವ ಪ್ರಯತ್ನ ಮಾಡಲಿ. ನೀವು ಬೆಂಬಲಿಸಿದ ಜೆಡಿಎಸ್ ಟಿಪ್ಪು ಜಯಂತಿ ಆಚರಿಸಿಲ್ಲ. ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕನಿಗೆ ಅವಮಾನ ಮಾಡಿದ್ದಾರೆ ಎಂದು ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.