ಮೂಡುಬಿದಿರೆ: ಮಾ.22ರಂದು ಶಿಕಾರಿಗೆಂದು ಹೋದ ಸ್ನೇಹಿತರಿಬ್ಬರು ಕರಿಂಜೆಯ ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ವಾರದೊಳಗೆ ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಸ್ಥಳೀಯ ಅರಂತ ಬಾಕ್ಯಾರು ನಿವಾಸಿ ಶೇಖರ್(23) ಬಂಧಿತ ಆರೋಪಿ.
ಪ್ರಾಂತ್ಯ ಗ್ರಾಮದ ಪೇಪರ್ಮಿಲ್ ನಿವಾಸಿ ಗ್ರೇಶನ್ ರೊಡ್ರಿಗಸ್ ಹಾಗೂ ಕೃಷಿಕ ಕರಿಂಜೆ ಕಕ್ಕೆಬೆಟ್ಟು ನಿವಾಸಿ ಪ್ರವೀಣ್ ತೌರೋ ಕಳೆದ ಮಾ.20ರ ರಾತ್ರಿ ಕರಿಂಜೆ ಗುತ್ತು ಶಾಲೆಯ ಬಳಿಯಿಂದ ಮಾರಿಂಜ ಅರಣ್ಯ ಪ್ರದೇಶಕ್ಕೆ ಶಿಕಾರಿಗೆ ಹೊರಟವರು ನಾಪತ್ತೆಯಾಗಿದ್ದರು.
ಮಾ 22 ರಂದು ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದವು. ಮೇಲ್ನೋಟಕ್ಕೆ ಇದು ಕಾಡು ಪ್ರಾಣಿಗಳ ಬೇಟೆಗೆ ಸ್ಥಳೀಯರು ವಿದ್ಯುತ್ ತಂತಿಗಳನ್ನು ಅಳವಡಿಸಿದ್ದು ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿರಬಹುದೇ ಎಂಬ ಸಂಶಯ ಹುಟ್ಟುಹಾಕಿತ್ತು.
ಅದಾಗಲೇ ಸ್ಥಳೀಯರಿಬ್ಬರು ನಾಪತ್ತೆಯಾದ ವಿಷಯದ ಬೆನ್ನಟ್ಟಿ ಹೋದ ಪೊಲೀಸರಿಗೆ ಓರ್ವ ಆರೋಪಿ ಸೆರೆಸಿಕ್ಕಿದ್ದು ಕಾಡು ಪ್ರಾಣಿಗಳ ಬೇಟೆಗೆ ವಿದ್ಯುತ್ ತಂತಿ ಅಳವಡಿಸಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಪ್ರಕರಣದಲ್ಲಿ ನಾಪತ್ತೆಯಾಗಿರುವ ಇನ್ನೋರ್ವ ಶಂಕಿತ ಆರೋಪಿಗಾಗಿ ತೀವ್ರ ಶೋಧ ನಡೆದಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.