ಬಂಟ್ವಾಳ: ತುಂಬೆ ಗ್ರಾಪಂಗೆ ಮಾಹಿತಿ ನೀಡದೆ ಗ್ರಾಮದ ಮೂರು ಮನೆಗಳ ಕೌಂಪೌಂಡ್ ಒಡೆದು ಹಾಕಿರುವ ಮನಪಾ ಅಧಿಕಾರಿಗಳ ಕ್ರಮವನ್ನು ಖಂಡಿಸಿ ತುಂಬೆ ಗ್ರಾಮಸ್ಥರು ಸೋಮವಾರ ತುಂಬೆಯಲ್ಲಿರುವ ನೀರಿನ ಸ್ಥಾವರಕ್ಕೆ ಮುತ್ತಿಗೆ ಹಾಕಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಚರಣೆ ನಡೆಸುವ ಮುನ್ನ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಬೇಕೆಂಬ ನಿಯಮವಿದ್ದರೂ ಗ್ರಾಪಂಗೆ ಯಾವುದೇ ಮಾಹಿತಿ ನೀಡದೆ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಸುವ ಪೈಪ್ ಮೇಲಿದ್ದ ತುಂಬೆ ಗ್ರಾಮದ ಮನೋರಮಾ, ಆರೀಫ್, ಆಶ್ರಫ್ ಎಂಬವರ ಮನೆಯ ಕೌಂಪೌಂಡನ್ನು ಏಕಾಏಕಿ ಕೆಡವಿ ಹಾಕಿ ಮನಪಾ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆಗೆ ತೋರಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅನ್ಯಾಯಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು. ನೀರಿನ ಸ್ಥಾವರಕ್ಕೆ ಸಂಬಂಧಿಸಿ ಮನಪಾ ತುಂಬೆ ಗ್ರಾಪಂಗೆ ತೆರಿಗೆ ಪಾವತಿಸಬೇಕು. ನೀರಿನ ಸ್ಥಾವರಕ್ಕೆ ಸಂಪರ್ಕಿಸುವ ರಸ್ತೆಗೆ ಮನಪಾ ಡಾಂಬರೀಕರ ಮಾಡಬೇಕು. ಅಲ್ಲದೆ, ಸ್ಥಾವರದಿಂದ ತುಂಬೆ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಒದಗಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ತುಂಬೆ ಜಂಕ್ಷನ್ನಿಂದ ಸ್ಥಾವರದವರೆಗೆ ಮೆರವಣಿಗೆ ಮೂಲಕ ಬಂದ ಪ್ರತಿಭಟನಕಾರರು ಸ್ಥಾವರದ ಆವರಣ ಮುಂದೆ ಜಮಾಯಿಸಿ ಕಾರ್ಯಾಚರಣೆ ನಡೆಸಿದ ಎಂಜಿಯರ್ ರಿಚಾರ್ಡ್ ಸಹಿತ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯ ಗಣೇಶ್ ಸುವರ್ಣ, ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಬಿ., ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.