ಬೆಳ್ತಂಗಡಿ: ಕಳೆದೊಂದು ವಾರಗಳಿಂದ ದಿಡುಪೆ ಪ್ರದೇಶದ ಸಿಂಗನಾರು, ಪರ್ಲ-ಮಕ್ಕಿ ಪ್ರದೇಶದಲ್ಲಿ ಪ್ರತನಿತ್ಯ ಒಂಟಿ ಸಲಗ ಹಾಗೂ 3 ಆನೆಗಳು ಹಿಂಡು ಕೃಷಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ಅಂಚಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ಮಲ್ಲ-ಮಕ್ಕಿ, ಸಿಂಗನಾರು, ನಂದಿಕಾಡು, ತಿಮ್ಮಯಕಂಡ ಸೇರಿದಂತೆ 15 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿನಿತ್ಯ2 ಪ್ರತ್ಯೇಕ ಒಂಟಿ ಸಲಗ ಹಾಗೂ 3 ಹಿಂಡು ಆನೆಗಳು ಬಾಳೆ, ಅಡಿಕೆ, ಭತ್ತದ ಗದ್ದೆಯನ್ನು ನೆಲಸಮ ಮಾಡಿದೆ.
ಗುರುವಾರ ರಾತ್ರಿಯೂ ಎರುಮುಡಿ ಮಲ್ಲ ನಡುಗದ್ದೆಯಾಗಿ ಆನೆಗಳು ಸಾಗಿವೆ. ಪ್ರತಿ ವರ್ಷ ಅರಣ್ಯ ಇಲಾಖೆಗೆ ಕ್ಯಾಂಪ್ ನಡೆಸುವಂತೆ ಮನವಿ ನೀಡಿದರೂ ಇತ್ತ ಸುಳಿಯದ ಸಿಬಂದಿ, 200, 300 ಅಡಿಕೆ ಬಾಳೆ ನಾಶವಾದಲ್ಲಿ 10, 15 ಸಾವಿರ ರೂ. ನೀಡಿ ಕೈತೊಳೆಯುತ್ತಿದೆ. ಆದರೆ ಸಂಮೃದ್ಧ ಕೃಷಿ ಪ್ರದೇಶ ಹಾನಿಯಾದರೂ ಇಲಾಖೆ ಕ್ಯಾಂಪ್ ನಡೆಸದಿರುವುದರಿಂದ ಬೆಳೆದ ಬೆಳೆ ಕೈಸೇರದಂತಾಗಿದೆ.
ಬೆಂಕಿ ಹಾಕಿ ಓಡಿಸುವ ಪ್ರಯತ್ನ ವಿಫಲ
ಬೆಂಕಿ ಹಾಕಿ ಓಡಿಸುವ ಪ್ರಯತ್ನಕ್ಕೂ ಆನೆಗಳು ಜಗ್ಗುತ್ತಿಲ್ಲ. ಪಟಾಕಿ ಸಿಡಿಸಿದರೆ ರೊಚ್ಚಿಗೆದ್ದು ಮನೆಗಳ ಮೇಲೆ ದಾಳಿ ನಡೆಸುವ ಅಥವಾ ಮತ್ತಷ್ಟು ಕೃಷಿ ಪ್ರದೇಶ ಹಾನಿಯಾಗುವ ಭೀತಿಯಿಂದ ಕೃಷಿಕರು ಮೌನಕ್ಕೆ ಶರಣಾಗುವಂತಾಗಿದೆ.