ಮೂಡುಬಿದಿರೆ: ಇಲ್ಲಿನ ಸ್ವರಾಜ ಮೈದಾನದಲ್ಲಿ ಶನಿವಾರದಿಂದ ಐದು ದಿನ ನಡೆಯುವ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅತ್ಲೆಟಿಕ್ಸ್ ವೈಭವದ ಕ್ರೀಡಾ ಮೆರವಣಿಗೆ ಮತ್ತು ಸಾಂಸ್ಕೃತಿಕ ಮೆರವಣಿಗೆ ಮೂಲಕ ಆರಂಭಗೊಂಡಿತು.
ಹನುಮಂತ ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಈ ಮೆರವಣಿಗೆಯಲ್ಲಿ ತುಳುನಾಡಿನ ಸಂಪ್ರದಾಯದಂತೆ ಸಿಡಿಮದ್ದನ್ನು ಸಿಡಿಸಿದ ನಂತರ ಒಂದೊಂದೆ ಕಲಾ ತಂಡಗಳು ಪ್ರದರ್ಶನ ನೀಡುತ್ತಾ ಮುಖ್ಯ ರಸ್ತೆಯಲ್ಲಿ ಮುಂದೆ ಸಾಗಿದವು. ಬೀದರ್ನ ಎತ್ತರದ ವ್ಯಕ್ತಿ ಮಾರುತಿ, ಗೂಳಿ-ಕಟ್ಟಪ್ಪ ಮೆರವಣಿಗೆಯ ಆರಂಭದಲ್ಲಿದ್ದು ಆಕರ್ಷಕ ಮೆರವಣಿಗೆಗೆ ಮುನ್ನುಡಿಯಾಯಿತು.
ಚೆಂಡೆ, ಬ್ಯಾಂಡ್ಸೆಟ್ನ ಸದ್ದು, ಕೊಂಬು ಕಹಳೆಯ ನಿನಾದ, ಶಂಖದ ನಾದ, ತೆಂಕು-ಬಡಗುತಿಟ್ಟಿನ ಯಕ್ಷಗಾನ ವೈಭವ, ಮಂಡ್ಯದ ಜಾನಪದ ಕಲಾತಂಡ ಹೀಗೆ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ತಂಡಗಳು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಿ ಬರುತ್ತಿರುವುದನ್ನು ರಸ್ತೆಯ ಇಕ್ಕೆಡೆಗಳಲ್ಲಿ ನಿಂತ ಜನ ಕಣ್ತುಂಬಿ ಆನಂದಿಸಿದರು.
ಅಶ್ವತ್ಥಪುರದ ನಾದಸ್ವರ ತಂಡ, ಬೆದ್ರ ಫ್ರೆಂಡ್ಸ್ನ ಹುಲಿ ವೇಷ, ಕಲ್ಲಡ್ಕದ ರಮೇಶ್ ಅವರ ಶಿಲ್ಪಾ ಗೊಂಬೆ ಬಳಗ, ಮಂಗಳೂರಿನ ದೀಪಕ್ ಶೆಟ್ಟಿ ಅವರ ಕಿಂಗ್ ಕೋಂಗ್, ಚಾಮರಾಜ ತಂಡದಿಂದ ಗೊರವರ ಕುಣಿತ, ಬೆಳ್ತಂಗಡಿ ರಾಜೀವ್ ಕಲಾ ತಂಡದ ವಂಶಿಕಾ ಬೊಂಬೆ ಬಳಗ, ಬಿದಿರೆ ಆಟ್ರ್ಸ್, ಮಂಡ್ಯದ ದೇವರಾಜ್ ತಂಡದಿಂದ ಪೂಜಾ ಕುಣಿತ ಮತ್ತು ವೀರಭದ್ರ ಕುಣಿತ, ಮಂಗಳೂರು ಕೊರಗರ ತಂಡದಿಂದ ಡೋಲು ಕುಣಿತ, ಕೇರಳದ ಪ್ರಸಿದ್ಧ ಜನಪದ ಕಲೆ ಮೋಹಿನ್ನಿಯಾಟ್ಟಂ ಇನ್ನಿತರ ಸಾಂಸ್ಕøತಿಕ ತಂಡಗಳ ಕಲಾಪ್ರೌಢಿಮೆ ಮೆರವಣಿಗೆಯಲ್ಲಿ ಅನಾವರಣಗೊಂಡಿತು.
ಇದರೊಂದಿಗೆ ಆಳ್ವಾಸ್ ವಿದ್ಯಾರ್ಥಿಗಳ ಕಲಾ ತಂಡ ಚಿಕ್ಕ ಮೇಳ, ಲಂಗದಾವಣಿ, ಶೃಂಗಾರಿ ಮೇಳ, ಪುರುಲಿಯ ನೃತ್ಯದೊಂದಿಗೆ ಗಮನಸೆಳೆಯಿತು. ಹೀಗೆ ಶಿಸ್ತು ಬದ್ದವಾಗಿ ಸಾಗಿ ಬಂದ ಕಲಾತಂಡಗಳು ಸ್ವರಾಜ್ಯಮೈದಾನದಲ್ಲಿ ಪ್ರದರ್ಶನ ನೀಡಿ ನೆರೆದ ಸಾವಿರಾರು ಕ್ರೀಡಾಪಟುಗಳನ್ನು, ಕ್ರೀಡಾಭಿಮಾನಿಗಳನ್ನು ರಂಜಿಸಿದವು. ಸುಮಾರು ನೂರಕ್ಕೂ ಮಿಕ್ಕಿ ಸಾಂಸ್ಕøತಿಕ ತಂಡಗಳು ಈ ಆಕರ್ಷಕ ಕ್ರೀಡಾಮೆರವಣಿಗೆಯಲ್ಲಿ ಭಾಗವಹಿಸಿ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅತ್ಲೆಟಿಕ್ಸ್ಗೆ ವಿಶೇಷ ಮೆರುಗು ತಂದವು. ಆಳ್ವಾಸ್ನ ಉಪನ್ಯಾಸಕ ಉದಯ ಮಂಜುನಾಥ್ ಕ್ರೀಡಾಮೆರವಣಿಗೆಯನ್ನು ನಿರೂಪಿಸಿದರು. ಪಥಸಂಚಲನದಲ್ಲಿ ದೇಶದ ವಿವಿಧ ವಿಶ್ವಾವಿದ್ಯಾನಿಲಯಗಳ ಕ್ರೀಡಾ ಪ್ರತಿನಿಧಿಗಳು ಪಾಲ್ಗೊಂಡವು.