ಚಿಟಗುಪ್ಪ: ಈ ಬಾರಿಯ ಮಾವಿನ ಹಂಗಾಮು ಮಾವು ಪ್ರಿಯರಿಗೆ ಬೆಲೆ ಏರಿಕೆಯ ಭಯ ಹುಟ್ಟಿಸಿದೆ. ರಸದ ಮಾವಿನ ಇಳುವರಿಯಂತೆಯೇ ಉಪ್ಪಿನ ಕಾಯಿಯ ಮಾವಿನ ಹಣ್ಣಿನ ಇಳುವರಿಯೂ ತೀರ ಕಡಿಮೆ ಇದೆ. ಪ್ರತಿ ವರ್ಷ ಪಟ್ಟಣ, ಸುತ್ತಲಿನ ಕುಡಂಬಲ್, ಬೆಳಕೇರಾ, ಶಾಮತಾಬಾದ್, ವಳಖಿಂಡಿ, ಇಟಗಾ, ಐನಾಪುರ್, ಉಡಬಾಳ ಇತರೆಡೆಗಳಿಂದಲೂ ಮಾವು ಬರುತ್ತಿತ್ತು, ಆದರೆ ಈ ಬಾರಿ ಎಲ್ಲಿಯೂ ಮಾವಿನ ಇಳುವರಿ ಇಲ್ಲದಾಗಿದೆ.
ರೈತರ ತೋಟಗಳಲ್ಲಿಯೂ ಮಾವಿನ ಮರಗಳಿಗೆ ಅಂದುಕೊಂಡಷ್ಟು ಮಾವಿನ ಕಾಯಿ ಕಟ್ಟಲಿಲ್ಲ. ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕೇವಲ ಶೇ 30 ರಿಂದ ಶೇ 40 ರಷ್ಟು ಮಾತ್ರ ಮಾವು ರೈತರ ಕೈ ಸೇರಿದೆ. ಹೀಗಾಗಿ ಮಾವಿನ ಹಣ್ಣಿಗೆ ತೀವ್ರ ಅಭಾವ ಕಂಡುಬಂದಿದೆ. ಉಪ್ಪಿನಕಾಯಿ ಸಿದ್ಧಪಡಿಸುವ ಮಾವು ₹5 ರಿಂದ ₹6ವರೆಗೆ ಮಾರಾಟವಾಗುತ್ತಿದ್ದವು, ಆದರೆ ಇಳುವರಿ ಕಡಿಮೆಯಾಗಿ 10 ರಿಂದ ₹15 ಗೆ ಒಂದು ಕಾಯಿ ಮಾರಾಟವಾಗುತ್ತಿವೆ.
‘ಬೆಲೆ ಕಡಿಮೆ ಇದ್ದಾಗ 100 ಕಾಯಿಯ ಆಚಾರ ಸಿದ್ಧಪಡಿಸಲು ₹500 ರಿಂದ ₹800 ವರೆಗೂ ಬರುತ್ತಿದ್ದ ಖರ್ಚು ಈಗ ₹2 ಸಾವಿರದ ವರೆಗೂ ಬರುತ್ತಿದೆ, ಬಡವರಿಗೆ ಆಚಾರ ಸಿದ್ಧಪಡಿಸಿಟ್ಟು ಕೊಳ್ಳುವುದು ಕನಸಿನ ಮಾತಾಗಿದೆ’ ಎಂದು ನಂದಿನಿ ಮಹಿಳಾ ಮಂಡಳದ ಸದಸ್ಯೆ ಶಾಂತಮ್ಮ ಹೇಳುತ್ತಾರೆ. ‘ಉಪ್ಪಿನಕಾಯಿ ಮಾವಿನ ಕಾಯಿಗಳನ್ನು ಆಚಾರ ಸಿದ್ಧಪಡಿಸಲು ಬಳಸುತ್ತಾರೆ. ಇಳುವರಿ ಕುಂಠಿತವಾಗಿದ್ದಕ್ಕೆ ಪ್ರತಿಶತ 50 ರಷ್ಟು ನಾರಿನಿಂದ ಕೂಡಿದ ಕಾಯಿಗಳೇ ಬಳಸಬೇಕಾಗಿ ಬಂದಿದೆ, ಹೀಗಾಗಿ ಸಿದ್ಧಪಡಿಸಿದ ಆಚಾರ ಬಹುದಿನಗಳ ವರೆಗೂ ಸುರಕ್ಷಿತವಾಗಿ ಉಳಿಯುವುದು ಕಷ್ಟ’ ಎಂದು ಅನುರಾಧ ಹೇಳುತ್ತಾರೆ.
ಇಳುವರಿ ಕಡಿಮೆ ಇರುವುದನ್ನೆ ಬಂಡವಾಳವಾಗಿಸಿಕೊಂಡಿರುವ ಮಾವಿನ ಮಿಡಿ ವ್ಯಾಪಾರದ ದಲ್ಲಾಳಿಗಳು ಗ್ರಾಹಕರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಪಟ್ಟಣ, ನಿರ್ಣಾ, ಕುಡಂಬಲ್, ಬೇಮಳಖೇಡಾ, ಮನ್ನಾಎಖ್ಖೇಳಿ, ಮುತ್ತಂಗಿ, ಮಂಗಲಗಿ ಗ್ರಾಮಗಳಲ್ಲಿ ರಸದ ಮಾವಿಕ ಕಾಯಿ ಜೊತೆಗೆ ಆಚಾರ ಹಾಕುವ ಮಾವಿನ ಕಾಯಿಗಳು ಕಲಬೆರೆಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ.