ಔರಾದ್: ಪಟ್ಟಣದ ಹೊರ ವಲಯದ ಕೃಷಿ ತರಬೇತಿ ಕೇಂದ್ರದ ಬಳಿ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ನಿರ್ಮಿಸಲಾಗುತ್ತಿರುವ ಎರಡು ದೊಡ್ಡ ಗೋದಾಮುಗಳ ಕಾಮಗಾರಿ ಪೂರ್ಣಗೊಂಡಿಲ್ಲ.
ಕರ್ನಾಟಕ ರಾಜ್ಯ ಉಗ್ರಾಣ ನಿಗಮದಿಂದ 2015-16ನೇ ಸಾಲಿನಲ್ಲಿ ಸುಮಾರು ₹1,139.86 ಲಕ್ಷ ವೆಚ್ಚದಲ್ಲಿ ಎರಡು ಗೋದಾಮು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಗೋಡೆ ನಿರ್ಮಾಣ ಪೂರ್ಣವಾಗಿದೆ. ಆದರೆ ಚಾವಣಿಗಾಗಿ ಕಬ್ಬಿನದ ಸರಳುಗಳನ್ನು ಹಾಕಿ ಹಾಗೇ ಬಿಡಲಾಗಿದೆ. ಏಳು ವರ್ಷಗಳಾದರೂ ಕಾಮಗಾರಿ ಮುಗಿಯದ್ದರಿಂದ ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿದಿವೆ.
‘ಉಗ್ರಾಣದ ಕಟ್ಟಡದ ಒಳಗೆ ಹುಲ್ಲು ಮುಳ್ಳಿನ ಪೊದೆ ಬೆಳೆದು ಒಳಗೆ ಹೋಗಲು ಭಯವಾಗುತ್ತಿದೆ’ ಎಂದು ಸ್ಥಳೀಯ ರೈತರು ಹೇಳುತ್ತಾರೆ.
‘ಈ ಗೋದಾಮು ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಸಾಕಷ್ಟು ಬಾರಿ ಸಂಬಂಧಿತರ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಕ್ರಮ ಆಗಿಲ್ಲ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತರಿಗೆ ದೂರು: ಗೋದಾಮು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಸರ್ಕಾರದ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು 2023 ಜನವರಿಯಲ್ಲೇ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
‘2015-16ರಲ್ಲಿ ಗೋದಾಮು ಕಾಮಗಾರಿಗೆ ₹1,139.86 ಲಕ್ಷ ಅಂದಾಜು ವೆಚ್ಚ ಇತ್ತು ಆದರೆ ಪರಿಷ್ಕೃತ ದರ ₹13 ಕೋಟಿಯಾಗಿದೆ. ಹಿಂದಿನ ಎಲ್ಲವೂ ವ್ಯರ್ಥವಾದಂತಾಗಿದ್ದು ಈಗ ಪುನಃ ಹೊಸ ಗೋದಾಮು ನಿರ್ಮಿಸಬೇಕಾಗುತ್ತದೆ. ಈ ಎಲ್ಲವುಗಳ ಬಗ್ಗೆ ದಾಖಲೆ ಸಂಗ್ರಹಿಸಿ ಕಳೆದ ತಿಂಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನೂ ದಾಖಲಿಸಲಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ತಿಳಿಸಿದ್ದಾರೆ.