ಬೀದರ್: ಹೋಬಳಿಯ ಡಾವರಗಾಂವ್ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ಜಲಜೀವನ ಮಿಷನ್ ಯೋಜನೆಯಡಿ ರಸ್ತೆ ಅಗೆಯಲಾಗಿದೆ. ಆದರೆ ಕಾಮಗಾರಿ ಸ್ಥಗಿತಗೊಂಡ ಕಾರಣ ತಗ್ಗು-ಗುಂಡಿಗಳಲ್ಲಿ ಹೊಲಸು ನೀರು ಸಂಗ್ರಹವಾಗಿ ಎಲ್ಲೆಡೆ ಗಬ್ಬು ನಾರುತ್ತಿದೆ. ಇದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿದೆ.
‘ಗ್ರಾಮದಲ್ಲಿ ಮೊದಲೇ ಸೂಕ್ತ ಚರಂಡಿ ವ್ಯವಸ್ಥೆ ಇರಲಿಲ್ಲ. ಹೊಲಸು ನೀರು ರಸ್ತೆ ಮೇಲೆ ಹರಿಯುತ್ತಿತ್ತು. ಅದರ ಮಧ್ಯೆ ಈಗ ಅಗೆದ ಸ್ಥಳದಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ಸದ್ಯ ಆ ತಗ್ಗು-ಗುಂಡಿಗಳಲ್ಲಿ ಹೊಲಸು ಸಂಗ್ರಹವಾಗಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ’ ಎಂದು ಪರಮೇಶ್ವರ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
‘ಸರ್ಕಾರ ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸಂಕಲ್ಪ ಹೊಂದಿದೆ. ಆದರೆ ಈ ಗ್ರಾಮದಲ್ಲಿ ಮಾತ್ರ ಮನೆಗೆ ನೀರು ಬರುವ ಬದಲು ಮನೆ ಮುಂದೆ ಹೊಲಸು ನೀರು ಸಂಗ್ರಹವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ ಕುಂಬಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗ್ರಾಮದ ಕೆಲವು ಬೀದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ತಮ್ಮ ಮನೆಯ ತ್ಯಾಜ್ಯ ನೀರನ್ನು ಬೀದಿಯಲ್ಲಿ ಹರಿಸುತ್ತಾರೆ. ಹೀಗೆ ರಸ್ತೆಗೆ ಬಿಡುವ ತ್ಯಾಜ್ಯ ನೀರು ತಗ್ಗು ಗುಂಡಿಗಳಲ್ಲಿ ಸೇರಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ಸೊಳ್ಳೆ, ಕ್ರಿಮಿ-ಕೀಟಗಳ ಉತ್ಪತ್ತಿಯ ತಾಣವಾಗಿದೆ. ಇದರಿಂದ ಅಲ್ಲಿನ ನಿವಾಸಿಗಳು ರೋಗ ರುಜಿನಗಳ ಭೀತಿಯನ್ನು ಎದುರಿಸುತ್ತಿದ್ದಾರೆ. ಸೊಳ್ಳೆಗಳ ಕಡಿತದಿಂದ ಆಸ್ಪತ್ರೆಗೆ ಸೇರುವಂತಾಗಿದೆ. ಗ್ರಾಮದಲ್ಲಿ ಸೂಕ್ತವಾದ ರಸ್ತೆ, ಚರಂಡಿ ನಿರ್ಮಿಸಿ ಗ್ರಾಮದಿಂದ ಕೊಳಚೆ ನೀರು ಹೊರ ಹೋಗಲು ವ್ಯವಸ್ಥೆ ಕಲ್ಪಿಸಿ ಎಂಬ ನಿವಾಸಿಗಳ ಮನವಿಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳಾದ ಬಸವರಾಜ ಪಾಟೀಲ, ಸಂತೋಷ ಸ್ವಾಮಿ, ಅಶೋಕ ಶೇರಿಕಾರ್, ರಮೇಶ ವಡಗಾಂವೆ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪ್ರಯುಕ್ತ ರಸ್ತೆ ಅಗೆದಿರುವುದರಿಂದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಾತ್ರಿ ಸಮಯದಲ್ಲಿ ಸಾರ್ವಜನಿಕರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯರು ಮತ್ತು ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಚಂದ್ರಕಾಂತ ತುಗಾಂವೆ, ರಾಜಶೇಖರ ಶೇರಿಕಾರ ಒತ್ತಾಯಿಸುತ್ತಾರೆ.