ಬೀದರ್: ‘ಕೃಷಿಕರು ಒಂದು ಸಮಗ್ರ ತಾಂತ್ರಿಕ ಮಾಹಿತಿ ಅರಿತು ವೈಜ್ಞಾನಿಕ ಪದ್ಧತಿಯಿಂದ ಕೃಷಿ ಮಾಡಿ ಹೆಚ್ಚಿನ ಲಾಭಾಂಶ ಪಡೆಯಲು ಪ್ರಯತ್ನಿಸಬೇಕು’ ಎಂದು ಪ್ರವರ್ದ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಪಾಟೀಲ ಸಲಹೆ ನೀಡಿದರು.
ನಗರದ ಹೊರ ವಲಯದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ರಿಲಯನ್ಸ್ ಫೌಂಡೇಶನ್ ಹಾಗೂ ಪ್ರವರ್ದ ಸಂಸ್ಥೆಯ ಸಹಯೋಗದಲ್ಲಿ ರೈತರಿಗೆ ಆಯೋಜಿಸಿದ್ದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಫಲವತ್ತಾದ ಮಣ್ಣು ಹಾಗೂ ಉತ್ತಮ ವಾತಾವರಣ ಇದೆ. ಆರ್ಥಿಕ ಇಳುವರಿ ಪಡೆಯಲು ರೈತರು ಬೆಳೆ ಪರಿವರ್ತನೆ, ಮಣ್ಣಿನ ಗುಣ ಆಧಾರಿತ ಬೆಳೆಗಳನ್ನು ಬೆಳೆಯಬೇಕು. ಸಮಗ್ರ ಕೃಷಿ ಪದ್ಧತಿಗಳಾದ ಹೈನುಗಾರಿಕೆ, ತೋಟಗಾರಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಕೃಷಿ ತೋಟ, ಅರಣ್ಯ ಮುಂತಾದ ಚಟುವಟಿಕೆಗಳಿಂದ ರೈತರ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದರು.
ರೈತರು ಸಮಯ ವ್ಯರ್ಥ ಮಾಡದೆ ಸದಾ ಶ್ರಮ ಜೀವಿಗಳಾಗಿ ಆಳಾಗಿ ದುಡಿದು ಅರಸನಾಗಿ ಉಣ್ಣಬೇಕು ಎನ್ನುವ ಗಾದೆ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.
ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥ ರಾಮಚಂದ್ರ ಶೇರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮೊಹಮ್ಮದ್ ಫಾರೂಕ್ ಹಾಗೂ ಸುನೀಲ ಬೋರಿವಾಡೆ ಇದ್ದರು.
ಸಹಾಯಕ ಪ್ರಾಧ್ಯಾಪಕ ಡಾ.ಅಂಬ್ರೇಶ ಟೊಮ್ಯಾಟೊ ಬೆಳೆಗಳಲ್ಲಿ ಆಧುನಿಕ ಬೇಸಾಯ ಕ್ರಮಗಳು, ಸಹಾಯಕ ಪ್ರಾಧ್ಯಾಪಕಿ ಜಾನ್ಹವಿ ಅವರು ಮೆಣಸಿನಕಾಯಿ ಬೆಳೆಯಲ್ಲಿ ಆಧುನಿಕ ಬೇಸಾಯ ಕ್ರಮಗಳು, ಡಾ. ರಾಜಕುಮಾರ ಎಂ ಜೇನು ಕೃಷಿ, ಡಾ. ಪ್ರಶಾಂತ ಟೊಮೆಟೊ ಮತ್ತು ಮೆಣಸಿನಕಾಯಿಯಲ್ಲಿ ಸಮಗ್ರ ಕೀಟ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳು, ಡಾ. ಅರುಣಕುಮಾರ ಕೆ. ಟಿ. ಟೊಮೆಟೊ ಹಾಗೂ ಮೆಣಸಿನಕಾಯಿಯಲ್ಲಿ ಸಮಗ್ರ ರೋಗ ನಿರ್ವಹಣೆ, ಡಾ.ಅಶೋಕ ಸೂರ್ಯವಂಶಿ ಅವರು ತರಕಾರಿ ಬೆಳೆಗಳಲ್ಲಿ ಸಸ್ಯ ಪ್ರಚೋದಕಗಳ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ, ಭಾಲ್ಕಿಯ 110 ರೈತರು ಪಾಲ್ಗೊಂಡಿದ್ದರು. ಡಾ.ಶ್ರೀನಿವಾಸ ಎನ್. ನಿರೂಪಿಸಿದರು. ಡಾ.ಅಶೋಕ ಸೂರ್ಯವಂಶಿ ಸ್ವಾಗತಿಸಿದರು, ಪ್ರವರ್ದ ಸಂಸ್ಥೆಯ ಶಿವರಾಜ ಗಿಲ್ಕೆ ವಂದಿಸಿದರು.